
ನವದೆಹಲಿ: ಭ್ರಷ್ಟಾಚಾರ ಮತ್ತು ಲಂಚ ಪಡೆದ ಆರೋಪದ ಮೇಲೆ ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಸಿಬಿಐ ತನ್ನದೇ ಆದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ ಪಿ) ಮತ್ತು ಉತ್ತರ ಕೋಲ್ಫೀಲ್ಡ್ ಲಿಮಿಟೆಡ್ನ(ಎನ್ಸಿಎಲ್) ಇಬ್ಬರು ಅಧಿಕಾರಿಗಳು ಸೇರಿದಂತೆ ಐವರನ್ನು ಬಂಧಿಸಿದೆ.
NCL ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಬರುವ 'ಮಿನಿ ರತ್ನ' ಕಂಪನಿಯಾಗಿದೆ.
ಫೆಡರಲ್ ತನಿಖಾ ಸಂಸ್ಥೆಯು ಆಗಸ್ಟ್ 17 ರಂದು ಸಿಂಗ್ರೌಲಿ ಮತ್ತು ಜಬಲ್ಪುರ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಶೋಧ ನಡೆಸಿತ್ತು.
ಎನ್ಸಿಎಲ್ನ ಸಿಎಂಡಿಯ ಖಾಸಗಿ ಕಾರ್ಯದರ್ಶಿ ಮತ್ತು ಮ್ಯಾನೇಜರ್(ಸೆಕ್ರೆಟರಿಯೇಟ್) ಸುಬೇದಾರ್ ಓಜಾ, ಮಾಜಿ ಎನ್ಸಿಎಲ್ ಸಿಎಂಡಿ ಭೋಲಾ ಸಿಂಗ್, ಅದರ ಪ್ರಸ್ತುತ ಮುಖ್ಯ ವಿಜಿಲೆನ್ಸ್ ಅಧಿಕಾರಿ(ಸಿವಿಒ) ಮತ್ತು ಇತರ ಕೆಲವು ಹಿರಿಯ ಅಧಿಕಾರಿಗಳು ಸೇರಿದಂತೆ ಎನ್ಸಿಎಲ್ನ ವಿವಿಧ ಅಧಿಕಾರಿಗಳ ಆವರಣದಲ್ಲಿ ಶೋಧ ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಬಲ್ಪುರದ ಸಿಬಿಐ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೋಲೀಸ್(DSP) ಜಾಯ್ ಜೋಸೆಫ್ ದಾಮ್ಲೆ, ಸುಬೇದಾರ್ ಓಜಾ; ಎನ್ ಸಿಎಲ್ ಮುಖ್ಯ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್(ನಿವೃತ್ತ) ಬಸಂತ್ ಕುಮಾರ್ ಸಿಂಗ್, ಸಂಗಮ್ ಇಂಜಿನಿಯರಿಂಗ್ನ ಮಧ್ಯವರ್ತಿ ಮತ್ತು ನಿರ್ದೇಶಕ ರವಿಶಂಕರ್ ಸಿಂಗ್ ಹಾಗೂ ಅವರ ಸಹವರ್ತಿ ದಿವೇಶ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಜಬಲ್ಪುರದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು ಆಗಸ್ಟ್ 24 ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
Advertisement