ತಮಿಳುನಾಡಿನಲ್ಲಿ ಹೊಸ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ; ಹೊಸ ಉಪಕ್ರಮಗಳಿಗೆ ಶಂಕುಸ್ಥಾಪನೆ
ತಿರುಚಿರಪಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಮಂಗಳವಾರ ಒಟ್ಟು 20,140 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಯೋಜನೆಗಳಿಗೆ ಚಾಲನೆ ನೀಡಿ, ಕೆಲವು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇತ್ತೀಚಿನ ಮಳೆ ಮತ್ತು ಡಿಸೆಂಬರ್ 2023 ರಲ್ಲಿ ರಾಜ್ಯದಲ್ಲಿ ಉಂಟಾದ ಪ್ರವಾಹ ಹಾಗೂ ಅದರಿಂದಾಗ ನಷ್ಟಗಳನ್ನು ಉಲ್ಲೇಖಿಸಿದರು ಮತ್ತು ಸಂತ್ರಸ್ತ ಕುಟುಂಬಗಳ ಸ್ಥಿತಿ ನೋಡಿ ನಾನು ತುಂಬಾ ಭಾವುಕನಾಗಿದ್ದೇನೆ ಎಂದರು.
ಈ ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಜನರೊಂದಿಗೆ ನಿಂತಿದೆ. ನಾವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ವೈಮಾನಿಕ ಮತ್ತು ಬಂದರುಗಳು, ರೈಲ್ವೆ, ಹೆದ್ದಾರಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪರಮಾಣು ಶಕ್ತಿ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ 20 ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಿದರು ಮತ್ತು ಉದ್ಘಾಟಿಸಿದರು.
ಇತ್ತೀಚಿಗಷ್ಟೇ ನಿಧನರಾದ ಡಿಎಂಡಿಕೆ ನಾಯಕ ಹಾಗೂ ನಟ ವಿಜಯಕಾಂತ್ ಅವರು ಚಿತ್ರರಂಗ ಮತ್ತು ರಾಜಕೀಯ ಎರಡರಲ್ಲೂ 'ಕ್ಯಾಪ್ಟನ್' ಆಗಿದ್ದರು ಎಂದು ಮೋದಿ ಹೇಳಿದರು. ನಾಯಕರಾಗಿ, ರಾಜಕೀಯದಲ್ಲಿ ವಿಜಯಕಾಂತ್ ಅವರು ಯಾವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿದ್ದಾರೆ ಎಂದು ಪ್ರಧಾನಿ ಸ್ಮರಿಸಿದರು.
ಇದೇ ವೇಳೆ ಇತ್ತೀಚೆಗೆ ನಿಧನರಾದ ತಮಿಳುನಾಡಿನ ಖ್ಯಾತ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ ಅವರು, ಸ್ವಾಮಿನಾಥನ್ ಅವರು ದೇಶಕ್ಕೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದರು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ