ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವಿಳಂಬವಾಗುವ ಬಗ್ಗೆ ಘೋಷಣೆ ಮಾಡುತ್ತಿದ್ದಾಗ ಇಂಡಿಗೋ ಪೈಲಟ್ಗೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಪೈಲಟ್ ವಿಮಾನ ಟೇಕಾಫ್ ಆಗುವುದು ವಿಳಂಬವಾಗಲಿದೆ ಎಂದು ಘೋಷಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಗ್ಗೆ ವಿಮಾನಯಾನ ಭದ್ರತಾ ಏಜೆನ್ಸಿ ತನಿಖೆ ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 14 ರಂದು ದೆಹಲಿಯಿಂದ ಗೋವಾಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೊರಡುತ್ತಿದ್ದ ವಿಮಾನ ಸಂಖ್ಯೆ 6E 2175 ಒಳಗೆ ಈ ಘಟನೆ ಸಂಭವಿಸಿದೆ.
ವೈರಲ್ ವಿಡಿಯೋದಲ್ಲಿ, ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದ್ದು, ಸಹ ಪೈಲಟ್ ಅನ್ನು ಅನುಪ್ ಕುಮಾರ್ ಎಂದು ಗುರುತಿಸಲಾಗಿದೆ. ಟೇಕಾಫ್ ಆಗುವುದು ವಿಳಂಬವಾಗಲಿದೆ ಎಂದು ಪೈಲಟ್ ಘೋಷಿಸುತ್ತಿದ್ದ ವೇಳೆ ಹಳದಿ ಜಾಕೆಟ್ ಧರಿಸಿದ್ದ ಪ್ರಯಾಣಿಕರೊಬ್ಬರು ಏಕಾಏಕಿ ಅವರಿಗೆ ಹೊಡೆದಿದ್ದಾರೆ.
ಕೂಡಲೇ ಗಗನಸಖಿ ಮತ್ತು ಮತ್ತೋರ್ವ ಪ್ರಯಾಣಿಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಗಲಾಟೆಗೆ ಕಾರಣನಾದ ವ್ಯಕ್ತಿ ಮತ್ತೆ ತನ್ನ ಸೀಟಿನತ್ತ ಮುಖಮಾಡುತ್ತಿದ್ದಂತೆ ಗಗನಸಖಿ 'ನೀವು ಈ ರೀತಿ ಮಾಡುವುದು ಸರಿಯಲ್ಲ; ನೀವು ಹೀಗೆ ಇದನ್ನು ಮಾಡಬಾರದು' ಎಂದು ಹೇಳಿದ್ದಾರೆ.
ದೆಹಲಿಯಿಂದ ಗೋವಾಕ್ಕೆ ಹೊರಟಿದ್ದ ಇಂಡಿಗೋ ವಿಮಾನ (6E-2175) ಮಂಜಿನಿಂದಾಗಿ ಟೇಕಾಫ್ ಆಗುವುದು ತಡವಾಗಲಿದೆ ಎಂದು ಪೈಲಟ್ ಹೇಳಿದಾಗ ಪ್ರಯಾಣಿಕರೊಬ್ಬರು ಪೈಲಟ್ ಅನುಪ್ ಕುಮಾರ್ಗೆ ಗುದ್ದಿರುವ ವಿಡಿಯೋ ವೈರಲ್ ಆಗಿದ್ದು, ಈ ಕುರಿತು ತನಿಖೆ ಪ್ರಾರಂಭವಾಗಿದೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.
ವಿಮಾನಯಾನ ಸಂಸ್ಥೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂಬಂಧ ಸಹ ಪೈಲಟ್ ಅನುಪ್ ಕುಮಾರ್ ಎಂಬುವರಿಂದ ದೂರು ಸ್ವೀಕರಿಸಲಾಗಿದೆ.
Advertisement