ನವದೆಹಲಿ: ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಮಸೀದಿ ಅವರಣದಲ್ಲಿರುವ ಶಿವಲಿಂಗ ಆಕೃತಿ ಸ್ಥಳದ ಸಂಪೂರ್ಣ ಸ್ವಚ್ಛತೆಗೆ 'ಸುಪ್ರೀಂ ಕೋರ್ಟ್' ಆದೇಶ ನೀಡಿದೆ.
ವಾರಣಾಸಿಯ ಜ್ಞಾನವಾಪಿ (Gyanvapi mosque) ʼವಜುಖಾನಾʼ (Wazukhana) ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಮಹತ್ವದ ತೀರ್ಪು ನೀಡಿದ್ದು, ಮಸೀದಿ ಸಂಕೀರ್ಣದ ವಜುಖಾನಾದ ಸಂಪೂರ್ಣ ಪ್ರದೇಶವನ್ನು ಸ್ವಚ್ಛಗೊಳಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ. ಪರ್ದೀವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಮೇಲುಸ್ತುವಾರಿಯಲ್ಲಿ ನೀರಿನ ತೊಟ್ಟಿ ಶುಚಿಗಳಿಸಲು ಆದೇಶಿಸಿತು. ಈ ಕಟ್ಟಡದಲ್ಲಿ ಶಿವಲಿಂಗವಿದೆ ಎಂದು ಹಿಂದೂಗಳ ಪರ ವಕೀಲರು ವಾದಿಸಿದ್ದರು. ಇದೇ ವಿಚಾರವಾಗಿ ಜ್ಞಾನವಾಪಿಯ ಮುಚ್ಚಿದ ಪ್ರದೇಶವನ್ನು ತೆರೆಯಬೇಕು ಮತ್ತು ತಕ್ಷಣ ಸ್ವಚ್ಛಗೊಳಿಸಬೇಕು ಎಂದು ಹಿಂದೂಗಳು ಮನವಿ ಸಲ್ಲಿಸಿದ್ದರು.
ಇದೀಗ ಹಿಂದೂಗಳ ಬೇಡಿಕೆಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಆ ಪ್ರದೇಶ (ವಜುಖಾನಾ)ದ ಸ್ವಚ್ಛತೆಗೆ ಆದೇಶ ನೀಡಿದೆ. ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತೆಗೆ ಕೋರ್ಟ್ ಅನುಮತಿ ನೀಡಿದೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ 2022 ರಲ್ಲಿ ‘ವಜುಖಾನಾ’ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಇಲ್ಲಿ ‘ಶಿವಲಿಂಗ’ ಆಕಾರದ ಕಲ್ಲು ಪತ್ತೆಯಾಗಿದ್ದು, ನಂತರ ಅದನ್ನು ಮುಚ್ಚಲು ಆದೇಶ ನೀಡಲಾಗಿತ್ತು. 16 ಮೇ 2022 ರಂದು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಕೊಳವೊಂದು ಪತ್ತೆಯಾಗಿತ್ತು. ಇದನ್ನು ಹಿಂದೂಗಳು ‘ಶಿವಲಿಂಗ’ ಎಂದು ವಾದಿಸಿದರೆ, ಮುಸ್ಲಿಮರು ‘ಕಾರಂಜಿ’ ಎಂದು ಪ್ರತಿಪಾದಿಸಿದ್ದರು.
Advertisement