ಮಣಿಪುರ: ಈಶಾನ್ಯ ರಾಜ್ಯ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ಮೂವರು ಬಿಎಸ್ಎಫ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ತೌಬಲ್ ಪೊಲೀಸ್ ಪ್ರಧಾನ ಕಛೇರಿಯನ್ನು ಮುತ್ತಿಗೆ ಹಾಕಿಲು ಯತ್ನಿಸಿದ ಉದ್ರಿಕ್ತ ಗುಂಪಿನ ಬಂದೂಕುಧಾರಿಗಳು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಮೊದಲಿಗೆ ಗುಂಪು ತೌಬಲ್ ಜಿಲ್ಲೆಯ ಖಂಗಾಬೊಕ್ನಲ್ಲಿ 3 ನೇ ಭಾರತೀಯ ರಿಸರ್ವ್ ಬೆಟಾಲಿಯನ್ ನ್ನು ಗುರಿಯಾಗಿಸಿದ್ದು, ಭದ್ರತಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಿದ್ದಾರೆ. ನಂತರ ಉದ್ರಿಕ್ತ ಗುಂಪು ತೌಬಲ್ ಪೊಲೀಸ್ ಪ್ರಧಾನ ಕಛೇರಿ ಮುತ್ತಿಗೆ ಹಾಕಲು ಯತ್ನಿಸಿದ್ದು, ಗುಂಪಿನಲ್ಲಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮವಾಗಿ ಬಿಎಸ್ಎಫ್ನ ಮೂವರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತೌಬಲ್ನಲ್ಲಿ ಜಿಲ್ಲಾಡಳಿತ ಕರ್ಫ್ಯೂ ವಿಧಿಸಿದೆ.
ರಾಜ್ಯದಲ್ಲಿ ಹೊಸ ಹಿಂಸಾಚಾರದ ವರದಿಗಳ ನಡುವೆ ಮೊರೆಹ್ ಪ್ರದೇಶದಲ್ಲಿ ಇಬ್ಬರು ಮಣಿಪುರ ಪೊಲೀಸ್ ಕಮಾಂಡೋಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
Advertisement