ಕೋಲ್ಕತ್ತಾ: ರೇಷನ್ ಅಂಗಡಿಗಳಲ್ಲಿ ಪ್ರಧಾನಿ ಭಾವಚಿತ್ರ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಇರುವ ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡಿಲ್ಲ ಎಂಬ ಕಾರಣಕ್ಕೆ ಕೇಂದ್ರಸರ್ಕಾರವು ಪಷ್ಟಿಮಬಂಗಾಳಕ್ಕೆ ನೀಡಬೇಕಿದ್ದ ಸುಮಾರು 7 ಸಾವಿರ ಕೋಟಿ ರೂ ನಿಧಿಯನ್ನು ತಡೆ ಹಿಡಿದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗಳನ್ನು ಹೊಂದಿರುವ ಫಲಕಗಳನ್ನು ಮತ್ತು ಫ್ಲೆಕ್ಸ್ಗಳನ್ನು ರಾಜ್ಯಾದ್ಯಂತ ಎಲ್ಲಾ ಪಡಿತರ ಅಂಗಡಿಗಳಲ್ಲಿ ಪದೇ ಪದೇ ಜ್ಞಾಪನೆ ಮಾಡಿದರೂ ಇನ್ನೂ ಹಾಕಿಲ್ಲ. ಹೀಗಾಗಿ ಕೇಂದ್ರದ ಯೋಜನೆಗಳಿಗೆ ಭತ್ತ ಖರೀದಿಸಲು ರಾಜ್ಯ ಸರ್ಕಾರಕ್ಕೆ 7,000 ಕೋಟಿ ರೂಪಾಯಿ ಬಿಡುಗಡೆ ಮಾಡುವುದನ್ನು ತಡೆಹಿಡಿಯಲು ಕೇಂದ್ರ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ನಿಲುವಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದ ಮೇಲೆ ಭತ್ತ ಸಂಗ್ರಹಣೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಬಂಗಾಳ ರಾಜ್ಯ ಸರ್ಕಾರಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಸ್ತಕ್ತ ಈ ಹಣಕಾಸು ವರ್ಷದಲ್ಲಿ ಎನ್ಎಫ್ಎಸ್ಎ ಯೋಜನೆಗಳಿಗಾಗಿ ಬಂಗಾಳ ಸರ್ಕಾರವು ಈಗಾಗಲೇ 8.52 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿದೆ. ಈ ವರ್ಷ ತನ್ನ ವಾರ್ಷಿಕ ಗುರಿ 70 ಲಕ್ಷ ಟನ್ಗೆ ವಿರುದ್ಧವಾಗಿ ಕೇಂದ್ರ ಪಾಲು ಸೇರಿದಂತೆ 22 ಲಕ್ಷ ಟನ್ ಭತ್ತವನ್ನು ಸಂಗ್ರಹಿಸಿದೆ. ಆದರೆ ಕೇಂದ್ರದ ಪರವಾಗಿ ಖರೀದಿಸಿದ ಭತ್ತಕ್ಕೆ ರಾಜ್ಯ ಸರ್ಕಾರ ಇನ್ನೂ ಮರುಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ.
ಖಾರಿಫ್ ಹಂಗಾಮಿನಲ್ಲಿ 70 ಲಕ್ಷ ಟನ್ ವಾರ್ಷಿಕ ಗುರಿಯಲ್ಲಿ ಶೇ.80 ರಷ್ಟು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕೇಂದ್ರದ ಮರುಪಾವತಿಯನ್ನು ಸ್ಥಗಿತಗೊಳಿಸುವುದರಿಂದ ಹಾಲಿ ಖಾರಿಫ್ ಋತುವಿನಲ್ಲಿ ಭತ್ತ ಸಂಗ್ರಹಣೆಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ. ಖಾರಿಫ್ ಹಂಗಾಮಿನ ಖರೀದಿ ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ. "ಈ ಸಮಯದಲ್ಲಿ ರಾಜ್ಯವು ಸಾಕಷ್ಟು ಹಣವನ್ನು ಪಡೆಯದಿದ್ದರೆ, ಸಂಪೂರ್ಣ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.
ಎಲ್ಲಾ ಪಡಿತರ ಅಂಗಡಿಗಳಲ್ಲಿ ಮೋದಿಯವರ ಫೋಟೋಗಳು ಮತ್ತು ಎನ್ಎಫ್ಎಸ್ಎ ಲಾಂಛನವಿರುವ ಸೈನ್ಬೋರ್ಡ್ಗಳು ಮತ್ತು ಫ್ಲೆಕ್ಸ್ಗಳನ್ನು ಹಾಕುವಂತೆ ಕೇಂದ್ರ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ರಾಜ್ಯ ಸರ್ಕಾರವನ್ನು ಕೇಳಿದೆ.
Advertisement