ಕಾಂಗ್ರೆಸ್ ಪ್ರಧಾನಿಯಾಗಿದ್ದರೆ ನಾಲ್ಕೇ ದಿನಕ್ಕೆ ಮಣಿಪುರ ಹಿಂಸಾಚಾರ ನಿಯಂತ್ರಿಸುತ್ತಿದ್ದರು: ರಾಹುಲ್ ಗಾಂಧಿ
ಕಲಿಯಬೋರ್: ಕಾಂಗ್ರೆಸ್ ನ ಪ್ರಧಾನಿ ಇದ್ದಿದ್ದರೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಾಲ್ಕೇ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಹೇಳಿದ್ದಾರೆ.
ಇಂದು ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೂಡ ಸೇನೆಯ ಸಹಾಯದಿಂದ ಮೂರೇ ದಿನಗಳಲ್ಲಿ ಈಶಾನ್ಯ ರಾಜ್ಯದ ಹಿಂಸಾಚಾರವನ್ನು ನಿಯಂತ್ರಿಸಬಹುದಿತ್ತು. ಆದರೆ ಬಿಜೆಪಿ ಅದನ್ನು ಮಾಡಲಿಲ್ಲ ಎಂದರು.
"ಮಣಿಪುರ ಹಲವಾರು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಆದರೆ ನಮ್ಮ ಪ್ರಧಾನಿ ಇಲ್ಲಿಯವರೆಗೆ ಅಲ್ಲಿಗೆ ಹೋಗಿಲ್ಲ. ಕಾಂಗ್ರೆಸ್ ಪ್ರಧಾನಿ ಆಗಿದ್ದರೆ, ಅವರು ಮೂರೇ ದಿನಗಳಲ್ಲಿ ಅಲ್ಲಿಗೆ ಹೋಗುತ್ತಿದ್ದರು ಮತ್ತು ನಾಲ್ಕನೇ ದಿನವೇ ಬೆಂಕಿಯನ್ನು ನಂದಿಸುತ್ತಿದ್ದರು" ರಾಹುಲ್ ಗಾಂಧಿ ಹೇಳಿದ್ದಾರೆ.
"ಪ್ರಧಾನಿ ಸೇನೆಗೆ ಆದೇಶ ನೀಡಿದರೆ, ಮೂರು ದಿನಗಳಲ್ಲಿ ಹಿಂಸಾಚಾರವನ್ನು ನಿಲ್ಲಿಸಬಹುದು. ಆದರೆ, ಹಿಂಸಾಚಾರವನ್ನು ನಿಯಂತ್ರಿಸಲು ಬಿಜೆಪಿ ಬಯಸುವುದಿಲ್ಲ. ಅದಕ್ಕಾಗಿಯೇ ಪ್ರಧಾನಿ ಅಲ್ಲಿಗೆ ಹೋಗಿ ಎಂದು ಸೇನೆಗೆ ಆದೇಶಿಸುವುದಿಲ್ಲ' ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಸ್ಸಾಂನಲ್ಲಿ ಬಿಜೆಪಿ ಆಡಳಿತದ ಸರ್ಕಾರ, ಜನರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ಜನ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಕಾಂಗ್ರೆಸ್ಗೆ ಭಾರಿ ಬೆಂಬಲ ಸೂಚಿಸುತ್ತಿದ್ದಾರೆ ಎಂದರು.
ಬೆರಳೆಣಿಕೆಯಷ್ಟು ಜನ ಬಿಜೆಪಿ ಬಾವುಟ ಹಿಡಿದು ಓಡಾಡುತ್ತಿದ್ದಾರೆ. ಆದರೆ ಹೆಚ್ಚಿನ ಜನ ನಮ್ಮೊಂದಿಗಿದ್ದಾರೆ. ನಾಯಕರು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ದುರಹಂಕಾರ ಮತ್ತು ದ್ವೇಷ ತುಂಬಿಕೊಂಡಿರುವ ವ್ಯಕ್ತಿಗಳು ಶೀಘ್ರದಲ್ಲೇ ಕಣ್ಮರೆಯಾಗುತ್ತಾರೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ