
ನವದೆಹಲಿ: ರಾಜ್ಯಸಭೆಯ ಚೊಚ್ಚಲ ಭಾಷಣದಲ್ಲೇ ಮಹಿಳೆಯರ ಆರೋಗ್ಯದ ಬಗ್ಗೆ ಮಾತನಾಡಿದ್ದ ನಾಮನಿರ್ದೇಶಿತ ಸದಸ್ಯೆ ಸುಧಾಮೂರ್ತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ನಿನ್ನೆ ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದ ಸುಧಾಮೂರ್ತಿ ಅವರು ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮದ ಅಗತ್ಯವಿದೆ. ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದರು.
ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಸುಧಾಮೂರ್ತಿ ಅವರನ್ನು ಅಭಿನಂದಿಸಿದ್ದು, ''ಮಹಿಳೆಯರ ಆರೋಗ್ಯದ ಕುರಿತು ವಿವರವಾಗಿ ಮಾತನಾಡಿದ ಸುಧಾ ಮೂರ್ತಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಆದ್ಯತಾ ವಲಯವಾಗಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯದ ಮೇಲೆ ಗಮನ ಹರಿಸಿದೆ'' ಎಂದು ಹೇಳಿ ಸುಧಾಮೂರ್ತಿ ಅವರು ತಾಯಂದಿರ ಕುರಿತು ಭಾವನಾತ್ಮಕವಾಗಿ ಆಡಿದ ಮಾತುಗಳನ್ನು ಪ್ರಸ್ತಾಪಿಸಿ ಶ್ಲಾಘಿಸಿದರು. ಆಗ ಸುಧಾಮೂರ್ತಿ ಅವರು ಎದ್ದು ನಿಂತು ಕೃತಜ್ಞತೆ ಸಲ್ಲಿಸಿದರು.
ಸುಧಾಮೂರ್ತಿ ಭಾಷಣ
ಒಂಬತ್ತು ಮತ್ತು 14 ವರ್ಷದೊಳಗಿನ ಹುಡುಗಿಯರಿಗೆ ನೀಡಲು ಲಸಿಕೆ ಇದೆ. ಇದನ್ನು ಗರ್ಭಕಂಠದ ಲಸಿಕೆ ಎಂದು ಕರೆಯಲಾಗುತ್ತದೆ. ಹುಡುಗಿಯರು ಅದನ್ನು ತೆಗೆದುಕೊಂಡರೆ, ಕ್ಯಾನ್ಸರ್ ತಪ್ಪಿಸಬಹುದು ... ನಮ್ಮ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ನಾವು ಲಸಿಕೆಯನ್ನು ಉತ್ತೇಜಿಸಬೇಕು. ಏಕೆಂದರೆ, ಚಿಕಿತ್ಸೆಗಿಂತ ತಡೆಗಟ್ಟುವಿಕೆಯ ಉಪಕ್ರಮಗಳು ಮುಖ್ಯ’ ಎಂದು ಸುಧಾಮೂರ್ತಿ ಪ್ರತಿಪಾದಿಸಿದ್ದರು.
ಅಲ್ಲದೆ ‘ಸರ್ಕಾರವು ಕೋವಿಡ್ ಸಮಯದಲ್ಲಿ ದೊಡ್ಡ ಲಸಿಕಾ ಅಭಿಯಾನ ನಡೆಸಿದೆ. ಆದ್ದರಿಂದ 9-14 ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಲಸಿಕೆ ನೀಡುವುದು ತುಂಬಾ ಕಷ್ಟಕರವಾಗುವುದಿಲ್ಲ. ಗರ್ಭಕಂಠದ ಲಸಿಕೆಯನ್ನು ಪಶ್ಚಿಮದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದನ್ನು ಕಳೆದ 20 ವರ್ಷಗಳಿಂದ ಬಳಸಲಾಗುತ್ತಿದೆ’ ಎಂದಿದ್ದರು.
ಇದಲ್ಲದೆ ದೇಶದ ಪ್ರವಾಸೋಧ್ಯಮ ಕುರಿತು ಮಾತನಾಡಿದ್ದ ಅವರು, ''57 ದೇಶೀಯ ಪ್ರವಾಸಿ ತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಪರಿಗಣಿಸಬೇಕು. ಇವುಗಳಲ್ಲಿ ಕರ್ನಾಟಕದ ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ, ಲಿಂಗರಾಜ ದೇವಾಲಯ ಸೇರಿವೆ ಎಂದರು.
Advertisement