ಮಕ್ಕಳನ್ನು ಕಾರಿನಲ್ಲೇ ಬಿಟ್ಟು ಹೋದ ಪೋಷಕರು: ಅಪಹರಣಕ್ಕೊಳಗಾದ ಮಕ್ಕಳ ರಕ್ಷಣಾ ಕಾರ್ಯಾಚರಣೆಯ ರೋಚಕ ಕಥೆ....

ಮೊಬೈಲ್ ರಿಂಗ್ ಆಗುತ್ತಿದ್ದಂತೆಯೇ ಅಪಹರಣಕಾರ ಅದನ್ನು ಮಗುವಿನಿಂದ ಕಸಿದುಕೊಂಡಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಬಿಟ್ಟು ಕಳಿಸಬೇಕೆಂದರೆ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ.
arrest
ಬಂಧನ(ಸಾಂಕೇತಿಕ ಚಿತ್ರ)online desk
Updated on

ರಾತ್ರಿ 11:30 ವೇಳೆಗೆ ಸಿಹಿ ತಿನಿಸುಗಳನ್ನು ತರುವುದಕ್ಕಾಗಿ ದಂಪತಿ ಕಾರಿನಲ್ಲಿ ಬಿಟ್ಟು ಹೋಗಿದ್ದ ಇಬ್ಬರು ಮಕ್ಕಳನ್ನು ಕಿರಾತಕನೋರ್ವ ಮಾರಕಾಸ್ತ್ರಗಳನ್ನು ತೋರಿಸಿ ಅಪಹರಿಸಿದ್ದ ಘಟನೆ ದೆಹಲಿಯ ವಿಕಾಸ್ ಮಾರ್ಗ್ ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅವೇಳೆಯಲ್ಲಿ ಕಾರಿನಲ್ಲಿ ಪೋಷಕರಿಲ್ಲದೇ ಕುಳಿತಿದ್ದ 11 ವರ್ಷದ ಬಾಲಕಿ ಹಾಗೂ 3 ವರ್ಷದ ಬಾಲಕ ಇದ್ದುದ್ದನ್ನು ಕಂಡ ವ್ಯಕ್ತಿಯೋರ್ವ ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ಚಾಲೂ ಮಾಡಿದ್ದಾನೆ.

ಇದಕ್ಕೆ ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಮಾಂಸ ಕತ್ತರಿಸುವ ಚಾಪರ್ ನ್ನು ತೋರಿಸಿ ಬೆದರಿಕೆ ಹಾಕಿ ಸುಮ್ಮನಿರುವಂತೆ ಹೇಳಿದ್ದಾನೆ. ದಿಗ್ಭ್ರಮೆಗೊಂಡ ಮತ್ತು ಭಯಭೀತರಾದ, ಭಯಾನಕ ಪರಿಸ್ಥಿತಿ ಎದುರಿಸಿದ್ದರು.

ಅತ್ತ ಕಾರಿನಲ್ಲಿದ್ದ ತಮ್ಮ ಮಕ್ಕಳಿಗೆ ಏನಾಗುತ್ತಿದೆ ಎಂಬುದನ್ನೂ ಅರಿಯದ ಪೋಷಕರು ಸಿಹಿ ತಿನಿಸುಗಳನ್ನು ಖರೀದಿಸಿ 10 ನಿಮಿಷಗಳಲ್ಲಿ ವಾಪಸ್ಸಾದಾಗ ಕಾರು ನಾಪತ್ತೆಯಾಗಿದ್ದನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಮಗುವಿನ ಬಳಿ ಇದ್ದ ತನ್ನ ಪತ್ನಿಯ ಮೊಬೈಲ್ ಗೆ ಮಗುವಿನ ತಂದೆ ಕರೆ ಮಾಡಿದ್ದಾರೆ.

ಮೊಬೈಲ್ ರಿಂಗ್ ಆಗುತ್ತಿದ್ದಂತೆಯೇ ಅಪಹರಣಕಾರ ಅದನ್ನು ಮಗುವಿನಿಂದ ಕಸಿದುಕೊಂಡಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಬಿಟ್ಟು ಕಳಿಸಬೇಕೆಂದರೆ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ.

ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಮ್ಮ ಇಡೀ ಸಂಪನ್ಮೂಲಗಳನ್ನು ಬಳಸಿ ಕಾರ್ಯಾಚರಣೆಗೆ ಇಳಿದರು.

“ಸಂತ್ರಸ್ತರ ತಾಯಿಯೊಂದಿಗೆ SHO ಶಕರ್‌ಪುರ್, ಸಂತ್ರಸ್ತೆಯ ತಂದೆಯೊಂದಿಗೆ SHO ಲಕ್ಷ್ಮಿ ನಗರ, ಮತ್ತು PS ಶಕರ್‌ಪುರದ ಇನ್ನೂ ಎರಡು ತಂಡಗಳು ತಾಂತ್ರಿಕ ಕಣ್ಗಾವಲು ಬಳಸಿ ಕಾರನ್ನು ಬೆನ್ನಟ್ಟಲು ಪ್ರಾರಂಭಿಸಿದವು.” ಎಂದು ಪೊಲೀಸ್ ಉಪ ಕಮಿಷನರ್ (ಪೂರ್ವ) ಅಪೂರ್ವ ಗುಪ್ತಾ ಕಾರ್ಯಾಚರಣೆ ನಡೆದ ರೀತಿಯನ್ನು ವಿವರಿಸಿದ್ದಾರೆ.

ಅಪಹರಣಕಾರನು ಕತ್ತಲೆಯಾದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ತೀವ್ರ ಅನ್ವೇಷಣೆಯಲ್ಲಿದ್ದ ಪೊಲೀಸರು ಆತನ ಪ್ರತಿಯೊಂದು ನಡೆಯನ್ನೂ ನಿಗಾ ಇಟ್ಟಿದ್ದರು. ಸತತ 3 ಗಂಟೆಗಳ ಕಾಲ ಪೊಲೀಸರು ಆತನನ್ನು ಬೆನ್ನಟ್ಟಿದ್ದು, ಸುಮಾರು 20 ಪೊಲೀಸ್ ವಾಹನಗಳು ದೆಹಲಿಯ ರಸ್ತೆಗಳಲ್ಲಿ ಅಪಹರಣಕಾರನನ್ನು ಹಿಂಬಾಲಿಸಿದವು.

ಪೊಲೀಸರು ತನ್ನನ್ನು ಹಿಂಬಾಲಿಸುತ್ತಿರುವುದು ಅರಿತ ಅಪಹರಣಕಾರ ಹತಾಶೆಯಲ್ಲಿ ಕಾರನ್ನು ಸಮಯಪುರ್ ಬದ್ಲಿ ಪ್ರದೇಶದಲ್ಲಿ ಬಿಟ್ಟು ನಾಪತ್ತೆಯಾದ. ಪೊಲೀಸ್ ಅಧಿಕಾರಿಗಳು ಮಕ್ಕಳನ್ನು ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದರು.

“ಇತರ ಜಿಲ್ಲಾ ಪೊಲೀಸ್ ತಂಡಗಳು, ವಿಶೇಷವಾಗಿ ಹೊರ ಉತ್ತರ ಜಿಲ್ಲೆ ಮತ್ತು ಆರ್‌ಪಿಎಫ್ ಈ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಅವರ ಕ್ಷಿಪ್ರ ಕ್ರಮಗಳು ಸಹಕಾರಿಯಾಗಿದ್ದವು” ಎಂದು ಡಿಸಿಪಿ ಗುಪ್ತಾ ಶ್ಲಾಘಿಸಿದರು.

ಪ್ರಕರಣ ಸುಖಾಂತ್ಯವಾಗಿತ್ತಾದರೂ, ಆರೋಪಿಯನ್ನು ಹುಡುಕುವ ಸಂಬಂಧ ಪೊಲೀಸ್ ತಂಡಗಳು ಕೆಲಸ ಮಾಡುತ್ತಲೇ ಇದ್ದವು, ಅಪರಾಧ ಪ್ರಾರಂಭವಾದ ಸ್ಥಳದಿಂದ ಅದು ಕೊನೆಗೊಂಡ ಸ್ಥಳದವರೆಗೆ ಸಿಸಿಟಿವಿ ದೃಶ್ಯಗಳ ಪ್ರತಿ ತುಣುಕನ್ನು ಪರಿಶೀಲಿಸಿದಾಗ ಆರೋಪಿ ಅಪಹರಣಕಾರನನ್ನು ಪ್ರತೀಕ್ ಶ್ರೀವಾಸ್ತವ ಎಂದು ಗುರುತಿಸಲಾಗಿದ್ದು, ಜೂನ್ 4 ರಂದು ಬಂಧಿಸಲಾಯಿತು.

ಶ್ರೀವಾಸ್ತವ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಪೋಷಕರು ತಮ್ಮ ಮಕ್ಕಳನ್ನು ಎಂಜಿನ್ ಚಾಲನೆಯಲ್ಲಿರುವ ಕಾರುಗಳಲ್ಲಿ ಬಿಟ್ಟುಹೋದ ಉದಾಹರಣೆಗಳನ್ನು ಗಮನಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾನೆ. ಇದು ಮಕ್ಕಳನ್ನು ಕಾರಿನೊಂದಿಗೆ ಅಪಹರಿಸುವ ಯೋಜನೆಯನ್ನು ರೂಪಿಸಲು ಪ್ರೇರೇಪಿಸಿತು, ಅವರ ಪೋಷಕರಿಂದ ಗಮನಾರ್ಹವಾದ ಸುಲಿಗೆಗೆ ಬೇಡಿಕೆಯಿಡುವ ಗುರಿಯನ್ನು ಹೊಂದಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com