
ದೋಡಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿರುವ ಉಗ್ರರ ಹಾವಳಿಗೆ ಬೇಸತ್ತಿರುವ ಕಣಿವೆ ರಾಜ್ಯದ ಸ್ಥಳೀಯರು ಇದೀಗ ಸ್ವತಃ ತಾವೇ ಗನ್ ಹಿಡಿದು ಉಗ್ರರ ಹೆಡೆಮುರಿಕಟ್ಟಲು ಮುಂದಾಗಿದ್ದಾರೆ.
ಹೌದು.. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಸೈನಿಕರ ಸಾವಿಗೆ ಕಾರಣವಾದ ಉಗ್ರರನ್ನು ಪತ್ತೆ ಮಾಡಲು ಭದ್ರತಾ ಪಡೆಗಳಿಗೆ ಸ್ಥಳೀಯ ಗ್ರಾಮ ರಕ್ಷಣಾ ಸಿಬ್ಬಂದಿ (Village defence guards) ಮುಂದಾಗಿದ್ದು ತಾವೇ ಖುದ್ಧ ಗನ್ ಹಿಡಿದು ಕಾರ್ಯಾಚರಣೆಗೆ ಧುಮುಕಿದ್ದಾರೆ. ಜುಲೈ 17, 2024, ಬುಧವಾರ ಅಂದರೆ ನಿನ್ನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ದೇಸಾ ಪ್ರದೇಶದಲ್ಲಿ ಎನ್ಕೌಂಟರ್ ಸ್ಥಳದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಗ್ರಾಮ ರಕ್ಷಣಾ ಸಿಬ್ಬಂದಿಗಳು ಶಸ್ತ್ರಾಸ್ತ್ರ ಹಿಡಿದು ಉಗ್ರರ ಬೇಟೆಗೆ ನಿಂತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ದೇಸಾ ಅರಣ್ಯದಲ್ಲಿ ಸೋಮವಾರ ರಾತ್ರಿ ನಾಲ್ವರು ಸೈನಿಕರನ್ನು ಕೊಂದ ಭಯೋತ್ಪಾದಕರ ಹುಡುಕಾಟದಲ್ಲಿ .303 ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತರಾದ ಹತ್ತಾರು ಗ್ರಾಮ ರಕ್ಷಣಾ ಪಡೆಗಳು (ವಿಡಿಜಿಗಳು) ಭಾರತೀಯ ಭದ್ರತಾ ಪಡೆಗಳಿಗೆ ಸಹಾಯ ಮಾಡುತ್ತಿವೆ. ಭಯೋತ್ಪಾದಕರು ಈ ಪ್ರದೇಶದಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು VDG ಗಳು ಪ್ರತಿಜ್ಞೆ ಮಾಡಿದ್ದು, ಇದಕ್ಕಾಗಿ ತಾವು ಎಂತಹ ತ್ಯಾಗಕ್ಕಾದರೂ ಸಿದ್ಧ ಎಂದು ಹೇಳಿದ್ದಾರೆ. ಆದರೆ ಶಸ್ತ್ರಸಜ್ಜಿತ ಉಗ್ರರನ್ನು ಎದುರಿಸಲು ತಮಗೆ ಹೆಚ್ಚು ಅತ್ಯಾಧುನಿಕ ಸ್ವಯಂಚಾಲಿತ ರೈಫಲ್ಗಳು ಬೇಕು ಎಂದಿದ್ದಾರೆ.
ನಿಷೇಧಿತ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯೊಂದಿಗೆ ನಂಟು ಹೊಂದಿರುವ ಭಯೋತ್ಪಾದಕರನ್ನು ಬೇಟೆಯಾಡಲು ಗೈ ಮತ್ತು ಬಂದಾ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿರುವ ವಿಡಿಜಿ ಗುಂಪಿನ ಸದಸ್ಯ ಸುದರ್ಶನ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, "ನಾವು 14 ಗಂಟೆಗಳಿಂದ ಕಾಲ ನಿದ್ರೆ ಮಾಡಿಲ್ಲ. ಉಗ್ರರ ಕೃತ್ಯಗಳಿಂದಾಗಿ ಸ್ಥಳೀಯರಾದ ನಮಗೆ ನೆಮ್ಮದಿ ಇಲ್ಲದಂತಾಗಿದೆ. ನಿತ್ಯ ಯಾವ ಜಾಗದಲ್ಲಿ ಯಾವ ಬುಲೆಟ್ ಹಾರುತ್ತದೋ ಎಂದು ಪ್ರಾಣವನ್ನು ಕೈಯಲ್ಲಿ ಹಿಡಿದು ಬದುಕು ಸಾಗಿಸಬೇಕಿದೆ. ಹೀಗಾಗಿ ನಾವು ಇದೀಗ ಗಟ್ಟಿ ನಿರ್ಧಾರ ಮಾಡಿದ್ದು, ತಪ್ಪಿಸಿಕೊಂಡ ಉಗ್ರರ ಹೆಡೆಮುರಿ ಕಟ್ಟುತ್ತೇವೆ. ಅವರು ತಪ್ಪಿಸಿಕೊಂಡರು. ಆದರೆ ಅವರು ಎಷ್ಟು ಸಮಯದವರೆಗೆ ಓಡುತ್ತಾರೆ, ನಾವು ಅವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲವಾದ್ದರಿಂದ ಅವರು ಸಾಯುತ್ತಾರೆ" ಎಂದು ಅವರು ಹೇಳಿದ್ದಾರೆ.
10-15 ಸದಸ್ಯರನ್ನು ಒಳಗೊಂಡಿರುವ ಗ್ರಾಮ ರಕ್ಷಣಾ ಸಮಿತಿಗಳು (VDCs) ಈ ಹಿಂದೆ1995 ರಲ್ಲಿ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಬೆದರಿಕೆಗಳ ದೃಷ್ಟಿಯಿಂದ ಗ್ರಾಮಸ್ಥರಿಗೆ ಆತ್ಮರಕ್ಷಣೆಗಾಗಿ ಈ ತಂಡ ಕಟ್ಟಿಕೊಂಡಿದ್ದರು. ಇದೀಗ ಮತ್ತೆ ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದ್ದು, ಇದೇ ಸಂದರ್ಭದಲ್ಲಿ ಮತ್ತೆ ತಮ್ಮ ಕೈಗೆ ಬಂದೂಕು ಎತ್ತಿಕೊಂಡಿದ್ದು, ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಮೇಲೆ ವಿಡಿಜಿಗಳು ಗುಂಡು ಹಾರಿಸಿದ್ದು, ಗಂಧೋ ಪ್ರದೇಶದಿಂದ ಎರಡು ಸ್ಫೋಟಕ ಶೆಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ರಾತ್ರಿ 10:45 ರಿಂದ ಬುಧವಾರ ಬೆಳಗಿನ ಜಾವ 2 ಗಂಟೆಯ ನಡುವೆ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರು ಕ್ರಮವಾಗಿ ದೇಸಾ ಅರಣ್ಯ ಪ್ರದೇಶದಲ್ಲಿ ಕಲಾನ್ ಭಾಟಾ ಮತ್ತು ಪಂಚನ್ ಭಾಟಾ ಬಳಿ ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾರೆ. ಕಳೆದ ಕೆಲವು ದಿನಗಳಿಂದ ಭಯೋತ್ಪಾದಕರ ಚಲನವಲನದ ಬಗ್ಗೆ ಮಾಹಿತಿ ಸಿಗುತ್ತಿದೆ. ಆದರೆ ಅವರ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಸುದರ್ಶನ್ ಸಿಂಗ್ ಹೇಳಿದ್ದಾರೆ.
ಸೋಮವಾರ ರಾತ್ರಿ, ಭಯೋತ್ಪಾದಕರು ಶೋಧ ತಂಡದ ಮೇಲೆ ಗುಂಡಿನ ದಾಳಿ ನಡೆಸಿದರು, ಕ್ಯಾಪ್ಟನ್ ಸೇರಿದಂತೆ ನಾಲ್ವರು ಸೈನಿಕರನ್ನು ಕೊಂದರು. ಮೂರು ವಾರಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಜಮ್ಮು ಪ್ರದೇಶದಲ್ಲಿ ನಡೆದ ಮೂರನೇ ಪ್ರಮುಖ ಭಯೋತ್ಪಾದಕ ಘಟನೆಯಾಗಿದೆ.
ಉಗ್ರರ ವಿರುದ್ಧ ಹೋರಾಟ ನಿರಂತರ
ಇದೇ ವೇಳೆ ಉಗ್ರರ ವಿರುದ್ಧ ಹೋರಾಟ ನಿರಂತರ ಎಂದು ಹೇಳಿರುವ ಮತ್ತೊಬ್ಬ VDG ಸದಸ್ಯ ಸಂಜಯ್ ಸಿಂಗ್, "ಭಯೋತ್ಪಾದಕರು ಓಡಿಹೋಗಿದ್ದಾರೆ ಮತ್ತು ಈ ಪ್ರದೇಶವನ್ನು ಜೀವಂತವಾಗಿ ಬಿಡಲು ನಾವು ಅವರನ್ನು ಅನುಮತಿಸುವುದಿಲ್ಲ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಅಥವಾ ಇಲ್ಲದೆ ಭಯೋತ್ಪಾದಕರ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತವೆ. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ .303 ರೈಫಲ್ ಸ್ವಯಂಚಾಲಿತ ಶಸ್ತ್ರಾಸ್ತ್ರಕ್ಕೆ ಹೊಂದಿಕೆಯಾಗುವುದಿಲ್ಲ. ನಾವು ಪ್ರದೇಶದ ಸ್ಥಳಾಕೃತಿಯನ್ನು ತಿಳಿದಿದ್ದೇವೆ ಮತ್ತು ಅಮೆರಿಕ ನಿರ್ಮಿತ M4 ಕಾರ್ಬೈನ್ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಭಯೋತ್ಪಾದಕರನ್ನು ಎದುರಿಸಲು ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಅಗತ್ಯವಿದೆ" ಎಂದು ಅವರು ಹೇಳಿದರು.
"ಸರ್ಕಾರವು ನಮಗೆ (ವಿಡಿಜಿಗಳು) ಸರಿಯಾದ ನೀತಿಯನ್ನು ರೂಪಿಸಬೇಕು. ಸೇನೆ, ಪೊಲೀಸ್ ಅಥವಾ ಅರೆಸೇನಾ ಪಡೆಗಳಿಂದ ಮಾಜಿ ಸೈನಿಕರು ನಮ್ಮ ಗುಂಪುಗಳ ಮುಖ್ಯಸ್ಥರಾಗಲು ನಾವು ಬಯಸುತ್ತೇವೆ. 2022 ರಲ್ಲಿ, ವಿಶೇಷ ಪೊಲೀಸ್ ಅಧಿಕಾರಿಗಳು (SPOs) ನೇತೃತ್ವದ VDC ಗಳ ನೀತಿಯನ್ನು ಕೇಂದ್ರ ಗೃಹ ಸಚಿವಾಲಯವು ಪರಿಷ್ಕರಿಸಿತು ಮತ್ತು VDG ಗಳನ್ನು ಪರಿಚಯಿಸಲಾಯಿತು. VDC ಯೋಜನೆಯಲ್ಲಿ SPO ಗಳಿಗೆ ಮಾತ್ರ ಪಾವತಿಸಲಾಗಿದೆ. ಆದರೆ 2022 ರ ನಂತರ, VDG ಗಳ ಎಲ್ಲಾ ಸದಸ್ಯರಿಗೆ ಸರ್ಕಾರದಿಂದ ಆರ್ಥಿಕವಾಗಿ ಪರಿಹಾರ ನೀಡಲಾಗುತ್ತಿದೆ ಎಂದು ಸುದರ್ಶನ್ ಸಿಂಗ್ ಹೇಳಿದರು.
ದೋಡಾ ದಾಳಿಯ ಕುರಿತು ಸ್ಥಳೀಯ ನಿವಾಸಿ ರಮೇಶ್ ಗೋಪಿಯಾ ಮಾತನಾಡಿ, 17 ವರ್ಷಗಳ ನಂತರ ಈ ಪ್ರದೇಶದಲ್ಲಿ ಭಯೋತ್ಪಾದಕರ ಉಪಸ್ಥಿತಿಯು ಸ್ಥಳೀಯ ಜನರಲ್ಲಿ ಭಯವನ್ನು ಉಂಟುಮಾಡಿದೆ. ರಾತ್ರಿಯಲ್ಲಿಯೂ ಗುಂಡಿನ ದಾಳಿ ನಡೆದಿದೆ. ಆದರೆ ನಮ್ಮಲ್ಲಿ ವಿಡಿಜಿಗಳು ಇರುವುದರಿಂದ ನಾವು ಸುರಕ್ಷಿತವಾಗಿರುತ್ತೇವೆ. ದಾಳಿಯ ಸಂದರ್ಭದಲ್ಲಿ, ಸೇನೆ ಮತ್ತು ಪೊಲೀಸರು ಬರುವವರೆಗೂ ಅವರು ಭಯೋತ್ಪಾದಕರನ್ನು ಎದುರಿಸಬಹುದು ಎಂದರು.
ಅಂತೆಯೇ ಉತ್ತಮ ಶಸ್ತ್ರಾಸ್ತ್ರಗಳ ವಿಡಿಜಿಗಳ ಬೇಡಿಕೆಯನ್ನು ಬೆಂಬಲಿಸಿದ ಅವರು, 'ಜಮ್ಮು ಪ್ರದೇಶದಲ್ಲಿ ಉಗ್ರಗಾಮಿ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸುವುದರೊಂದಿಗೆ ವಿಡಿಜಿಗಳನ್ನು ನಿರ್ಲಕ್ಷಿಸಲಾಗಿದೆ. ಆದರೆ ಈಗ ಗುಂಪುಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ ಮತ್ತು "ಭಯೋತ್ಪಾದಕರಿಗೆ ಅರಣ್ಯ ಪ್ರದೇಶಗಳಲ್ಲಿ ಕಾಲಿಡಲು ಅವಕಾಶ ನೀಡುವುದಿಲ್ಲ ಎಂದು ನಮಗೆ ಖಚಿತವಾಗಿದೆ ಎಂದು ಗೋಪಿ ಹೇಳಿದರು.
ಉಗ್ರರ ಟ್ರ್ಯಾಕಿಂಗ್ ನಲ್ಲಿ ನೆರವು
ಇನ್ನು ವಿಡಿಜಿಗಳಿಗೆ ಸ್ಥಳೀಯ ಪ್ರದೇಶದ ಸಂಪೂರ್ಣ ಚಿತ್ರದ ಅರಿವಿದ್ದು, ಹೀಗಾಗಿ ಉಗ್ರರನ್ನು ಟ್ರ್ಯಾಕ್ ಮಾಡಲು ಅವರ ಪಾತ್ರ ತುಂಬಾ ಮಹತ್ವದ್ದಾಗುತ್ತದೆ. ಈ ಹಿಂದೆ ಸಾಕಷ್ಟು ಪ್ರಕರಣಗಳಲ್ಲಿ ವಿಡಿಜಿಗಳು ಸೇನೆಗೆ ನೆರವಾಗಿದ್ದಾರೆ. ಈ ವರ್ಷ ಜಮ್ಮು ಪ್ರದೇಶದ ರಾಜೌರಿ, ಪೂಂಚ್, ರಿಯಾಸಿ, ಉಧಮ್ಪುರ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ಭಯೋತ್ಪಾದಕರು ನಡೆಸಿದ ಸರಣಿ ದಾಳಿಗಳ ನಂತರ 11 ಭದ್ರತಾ ಸಿಬ್ಬಂದಿ ಮತ್ತು ಒಬ್ಬ ವಿಡಿಜಿ ಸದಸ್ಯ ಸೇರಿದಂತೆ 22 ಜನರನ್ನು ಉಗ್ರರು ಕೊಂದ ನಂತರ ವಿಡಿಜಿಗಳು ಗಮನ ಸೆಳೆಯುತ್ತಿದ್ದಾರೆ.
ಕಳೆದ ತಿಂಗಳು ಕಥುವಾ ಮತ್ತು ದೋಡಾ ಜಿಲ್ಲೆಯಲ್ಲಿ ನಡೆದ ಎರಡು ಎನ್ಕೌಂಟರ್ಗಳಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದರು. 2022-23ರ ಗೃಹ ಸಚಿವಾಲಯದ ವಾರ್ಷಿಕ ವರದಿಯ ಪ್ರಕಾರ, ಒಟ್ಟು 4,153 ವಿಡಿಜಿಗಳು ಮತ್ತು 32,355 ಎಸ್ಪಿಒಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ರಕ್ಷಣೆಗಾಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗಾಗಿ ವಿವಿಧ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
Advertisement