ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳಿಸಬೇಕಾಗುತ್ತದೆ; ಗೌರವ ನೀಡದೇ ಇದ್ದಲ್ಲಿ ನಾನೇ ಹೋಗುತ್ತೇನೆ: ಸಿಜೆಐ- ವಕೀಲರ ನಡುವೆ ತೀವ್ರ ವಾಗ್ವಾದ!

ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೆಡುಂಪಾರ ದೂರುತ್ತಲೇ ಇದ್ದರು. "ದಯವಿಟ್ಟು ಸೆಕ್ಯೂರಿಟಿಯನ್ನು ಕರೆಯಿರಿ. ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ನಾವು ಕೇಳುತ್ತೇವೆ" ಎಂದು ಸಿಟ್ಟಿಗೆದ್ದ ಸಿಜೆಐ ಹೇಳಿದರು.
CJI
ಸಿಜೆಐ online desk
Updated on

ನವದೆಹಲಿ: NEET-UG 2024 ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ CJI ಹಾಗೂ ವಕೀಲರ ನಡುವೆ ವಾಗ್ವಾದ ತೀವ್ರಗೊಂಡು, ಸಿಜೆಐ ವಕೀಲರಿಗೆ ಎಚ್ಚರಿಕೆ ನೀಡಿದ ಪ್ರಸಂಗಕ್ಕೆ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.

ಕೋರ್ಟ್ ನ ಪ್ರಕ್ರಿಯೆಗಳ ಬಗ್ಗೆ ನಿರ್ದೇಶನ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ವಕೀಲರಿಗೆ ಸಿಜೆಐ ಹೇಳಿದರು. ಸಿಜೆಐ ಮಾತನ್ನು ವಕೀಲರು ನಿರ್ಲಕ್ಷ್ಯಿಸಿದಾಗ ತೀವ್ರ ಅಸಮಾಧಾನಗೊಂಡ ಸಿಜೆಐ ಚಂದ್ರಚೂಡ್, ನಿಮ್ಮನ್ನು ಕೋರ್ಟ್ ನಿಂದ ಹೊರಗೆ ಕಳುಹಿಸಬೇಕಾಗುತ್ತದೆ, ಇದು ನಿಮಗೆ ನೀಡುತ್ತಿರುವ ಎಚ್ಚರಿಕೆ ಎಂದು ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರಗೆ ಸಿಜೆಐ ಹೇಳಿದ್ದಾರೆ.

ಅಡ್ವೊಕೇಟ್ ಮ್ಯಾಥ್ಯೂಸ್ ಜೆ ನೆಡುಂಪಾರ ಕೆಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದು, ಮುಖ್ಯ ವಕೀಲರಾದ ನರೇಂದ್ರ ಹೂಡಾ ತಮ್ಮ ವಾದವನ್ನು ಮುಂದುವರೆಸುತ್ತಿದ್ದಾಗ, ತಮಗೂ ವಾದ ಮಂಡಿಸಲು ಅವಕಾಶ ಮಾಡಿಕೊಡಬೇಕೆಂದು ಪದೇ ಪದೇ ಆಗ್ರಹಿಸುತ್ತಿದ್ದರು.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೂಡಾ ಅವರು ತಮ್ಮ ವಾದ ಮಂಡಿಸಿದ ನಂತರ ವಾದಿಸಲು ಅವಕಾಶ ನೀಡುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆಡುಂಪಾರ ಅವರಿಗೆ ತಿಳಿಸಿದರು.

ಆದರೆ ಸಿಜೆಐ ಮಾತನ್ನು ಕೇಳಿಸಿಕೊಳ್ಳದೇ ನೆಡುಂಪಾರ ಪದೇ ಪದೇ ಮಾತು ಮುಂದುವರೆಸಿದ ಕಾರಣ, ಅಸಮಾಧಾನಗೊಂಡ ಸಿಜೆಐ, ನೀವು ಕುಳಿತುಕೊಳ್ಳದೇ ಇದ್ದಲ್ಲಿ ನಿಮ್ಮನ್ನು ಕೋರ್ಟ್ ನಿಂದ ಹೊರ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲರು, ನ್ಯಾಯಮೂರ್ತಿಗಳಿಂದ ನನಗೆ ಗೌರವ ಸಿಗದೇ ಇದ್ದಲ್ಲಿ, ನಾನೇ ಕೋರ್ಟ್ ನಿಂದ ಹೊರನಡೆಯುತ್ತೇನೆ ಎಂದು ಹೇಳಿದರು.

ಆದರೆ, ನ್ಯಾಯಾಲಯದಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನೆಡುಂಪಾರ ದೂರುತ್ತಲೇ ಇದ್ದರು. "ದಯವಿಟ್ಟು ಸೆಕ್ಯೂರಿಟಿಯನ್ನು ಕರೆಯಿರಿ. ಅವರನ್ನು ನ್ಯಾಯಾಲಯದಿಂದ ತೆಗೆದುಹಾಕುವಂತೆ ನಾವು ಕೇಳುತ್ತೇವೆ" ಎಂದು ಸಿಟ್ಟಿಗೆದ್ದ ಸಿಜೆಐ ಹೇಳಿದರು.

CJI
ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ ಸಿಜೆಐ ಚಂದ್ರಚೂಡ್

"ನೀವು ಜನಪ್ರಿಯತೆಗಾಗಿ ಮಾತನಾಡಬೇಕಿಲ್ಲ. ನೀವು ನನ್ನ ಮಾತನ್ನು ಕೇಳಬೇಕಾಗುತ್ತದೆ. ನನ್ನ ನ್ಯಾಯಾಲಯದ ಉಸ್ತುವಾರಿಯನ್ನು ನಾನು ಹೊಂದಿದ್ದೇನೆ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಈ ವೇಳೆ ವಕೀಲರು ಬೆಂಬಲಕ್ಕಾಗಿ ತಮ್ಮ ಸಹೋದ್ಯೋಗಿಗಳ ಕಡೆಗೆ ತಿರುಗಿದರು.

ಅಸಮಾಧಾನಗೊಂಡ ಅಡ್ವೊಕೇಟ್, ತಾವು ಕೋರ್ಟ್ ನಿಂದ ಹೊರಹೋಗುವುದಾಗಿ ಪದೇ ಪದೇ ಹೇಳುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ, ನಾನು ನಿಮ್ಮ ವಾದ ಆಲಿಸುತ್ತೆನೆ, ಹೂಡಾ ಅವರ ವಾದ ಮಂಡನೆ ಮುಕ್ತಾಯವಾಗಲಿ ಆ ಬಳಿಕ ನಿಮ್ಮ ವಾದ ಕೇಳುತ್ತೇನೆ, ಅದಕ್ಕೂ ಮುನ್ನ ನೀವು ಕೋರ್ಟ್ ನಿಂದ ಹೊರನಡೆಯುವುದಾದರೆ ಅದು ನಿಮ್ಮ ಇಷ್ಟ ಎಂದು ಹೇಳಿದರು.

ಈ ಪ್ರಹಸನದಿಂದಾಗಿ ಕೋರ್ಟ್ ಕಲಾಪ, ಶಾಸನ ಸಭೆಯಂತೆ ಭಾಸವಾಯಿತು ಎಂದು ವಿಡಿಯೋ ಹಂಚಿಕೊಂಡ ನೆಟ್ಟಿಗರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com