
ಶ್ರೀನಗರ: ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸ್ವತಂತ್ರ ಅಭ್ಯರ್ಥಿ ಮತ್ತು ಮಾಜಿ ಶಾಸಕ ಇಂಜಿನಿಯರ್ ರಶೀದ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭೆ ಕ್ಷೇತ್ರವನ್ನು ಗೆಲ್ಲುವ ಮೂಲಕ ಅನೇಕರನ್ನು ಅಚ್ಚರಿಗೊಳಿಸಿದ್ದಾರೆ. ತ್ರಿಕೋನ ಸ್ಪರ್ಧೆಯಲ್ಲಿ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೋನ್ ಅವರನ್ನು ಸೋಲಿಸಿ ಇಂಜಿನಿಯರ್ ರಶೀದ್ ಗೆಲುವು ಸಾಧಿಸಿದ್ದಾರೆ.
ಬಾರಾಮುಲ್ಲಾ ಲೋಕಸಭೆ ಕ್ಷೇತ್ರ ಸಾಂಪ್ರದಾಯಿಕವಾಗಿ ನ್ಯಾಷನಲ್ ಕಾನ್ಫರೆನ್ಸ್ ನ ಭದ್ರಕೋಟೆಯಾಗಿರುವುದರಿಂದ ಇಂಜಿನಿಯರ್ ರಶೀದ್ ಗೆಲುವು ವಿಶೇಷವಾಗಿ ಗಮನಾರ್ಹವಾಗಿದೆ. ಯುವ ಜನತೆ ಮತ್ತು ಸಹಾನುಭೂತಿಯ ಮತ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಕ್ಷೇತ್ರದ ನಾಲ್ಕೂ ಜಿಲ್ಲೆಗಳಲ್ಲಿ ಯುವಕರು ಜೈಲುಪಾಲಾಗಿದ್ದ ನಾಯಕನಿಗೆ ಹೆಚ್ಚಿನ ಬೆಂಬಲ ನೀಡಿದ್ದಾರೆ.
ಏತನ್ಮಧ್ಯೆ, ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಉಧಮ್ಪುರ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಲಾಲ್ ಸಿಂಗ್ ವಿರುದ್ಧ ಕಡಿಮೆ ಅಂತರದಲ್ಲಿ ಜಿತೇಂದ್ರ ಸಿಂಗ್ ಗೆಲುವು ಸಾಧಿಸಿದ್ದಾರೆ.
ಮತ್ತೊಂಡೆದೆ NC ಪಕ್ಷದ ಮಿಯಾನ್ ಅಲ್ತಾಫ್ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ 2.79 ಲಕ್ಷ ಮತಗಳಿಂದ ಸೋಲಿಸಿದರು. ಈ ಸೋಲು ಮೆಹಬೂಬಾ ಅವರ ಸತತ ಎರಡನೇ ಸೋಲಾಗಿದೆ. ಹಲವಾರು ಹಿರಿಯ ನಾಯಕರು ತೊರೆದಿರುವುದರಿಂದ ಅವರ ಪಕ್ಷವು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ಶ್ರೀನಗರದಲ್ಲಿ ಎನ್ಸಿಯ ಅಗಾ ರುಹುಲ್ಲಾ ಅವರು ಪಿಡಿಪಿಯ ವಹೀದ್ ಪಾರಾ ಅವರನ್ನು ಸೋಲಿಸುವ ಮೂಲಕ ವಿಜಯಶಾಲಿಯಾದರು. ರುಹುಲ್ಲಾ ಲೋಕಸಭೆಯಲ್ಲಿ ಆರ್ಟಿಕಲ್ 370 ರದ್ದತಿಯ ವಿಷಯವನ್ನು ಪ್ರಸ್ತಾಪಿಸುವ ವಾಗ್ದಾನ ಮಾಡಿದರು.
ಲಡಾಖ್ನಲ್ಲಿ ಎನ್ಸಿಯಿಂದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಜಿ ಹನೀಫಾ ಜಾನ್ 27,862 ಮತಗಳಿಂದ ಗೆದ್ದಿದ್ದಾರೆ. ಜಾನ್ ಇಂಡಿಯಾ ಮೈತ್ರಿಕೂಟ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ತ್ಸೆರಿಂಗ್ ನಮ್ಗ್ಯಾಲ್ ಮತ್ತು ಬಿಜೆಪಿಯ ತಾಶಿ ಗ್ಯಾಲ್ಸನ್ ಅವರನ್ನು ಸೋಲಿಸಿದ್ದಾರೆ. ಇದು ಈ ಪ್ರದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ಡೈನಾಮಿಕ್ಸ್ ಅನ್ನು ತೋರಿಸುತ್ತದೆ.
Advertisement