ಇನ್ನು ಮುಂದೆ ಎನ್ಡಿಎನಲ್ಲೇ ಶಾಶ್ವತವಾಗಿ ಇರುತ್ತೇನೆ: ಪ್ರಧಾನಿ ಮೋದಿ ರ್ಯಾಲಿಯಲ್ಲಿ ನಿತೀಶ್ ಕುಮಾರ್
ಔರಂಗಾಬಾದ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ಡಿಎ)ನಲ್ಲಿ ಶಾಶ್ವತವಾಗಿ ಇರುವುದಾಗಿ ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ 21,400 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ನಾನು ಶಾಶ್ವತವಾಗಿ ಎನ್ಡಿಎನಲ್ಲಿಯೇ ಇರುತ್ತೇನೆ ಎಂದು ಈಗ ಪ್ರಧಾನಿಗೆ ಭರವಸೆ ನೀಡುತ್ತೇನೆ ಎಂದರು.
ನಿತೀಶ್ ಕುಮಾರ್ ಅವರು ಕಳೆದ ತಿಂಗಳು ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಜೊತೆಗೆ ಮೈತ್ರಿ ಮುರಿದುಕೊಂಡು ತಮ್ಮ ಹಳೆಯ ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷದೊಂದಿಗೆ ಹೊಸ ಸರ್ಕಾರ ರಚಿಸಿದ್ದರು.
"ಬಿಹಾರಕ್ಕೆ ನಾವು ನಿಮ್ಮನ್ನು(ಪ್ರಧಾನಿ) ಸ್ವಾಗತಿಸುತ್ತೇವೆ. ಬಿಹಾರದಲ್ಲಿ ಸಾಕಷ್ಟು ಅಭಿವೃದ್ದಿಗಳು ನಡೆಯುತ್ತಿವೆ. ಈಗ ಈ ಕೆಲಸಗಳು ವೇಗವಾಗಿ ನಡೆಯಲಿವೆ ಮತ್ತು ಬಿಹಾರ ಅಭಿವೃದ್ಧಿಯ ಹೊಸ ಮೈಲಿಗಲ್ಲು ತಲುಪುತ್ತದೆ. ಬಿಹಾರದ ಜನ ಈಗ ಆರ್ಥಿಕವಾಗಿ ಹೆಚ್ಚು ಸಬಲರಾಗುತ್ತಾರೆ" ಎಂದು ನಿತೀಶ್ ಕುಮಾರ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ