ಚೆನ್ನೈ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಹಿಂದೆ ತಮಿಳುನಾಡಿನ ಜನರ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿಯ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಸಿಎಂ ಎಂಕೆ ಸ್ಟಾಲಿನ್ ಇಂದು ತೀವ್ರವಾಗಿ ಖಂಡಿಸಿದ್ದಾರೆ.
'ದ್ವೇಷ ಭಾಷಣ' ಮಾಡಿರುವ ಬಿಜೆಪಿ ಸಚಿವೆ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಚುನಾವಣಾ ಆಯೋಗವನ್ನು ಸ್ಟಾಲಿನ್ ಒತ್ತಾಯಿಸಿದರು. ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದು ಇಲ್ಲಿಗೆ ಬಂದು ಬಾಂಬ್ಗಳನ್ನು ಇಡುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿರುವ ವೀಡಿಯೊವೊಂದು ಹಂಚಿಕೊಂಡಿರುವ ಸ್ಟಾಲಿನ್, ಇದು ಅಜಾಗರೂಕ ಹೇಳಿಕೆಯಾಗಿದೆ ಎಂದು ಹೇಳಿದರು.
ಇಂತಹ ಹೇಳಿಕೆಗಳನ್ನು ಕೊಡಬೇಕೆಂದರೆ ಅವರು ಒಬ್ಬರು NIA ಅಧಿಕಾರಿಯಾಗಿರಬೇಕು ಅಥವಾ #RameshwaramCafeBlast ನೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು. ಈ ಇಂತಹ ಹೇಳಿಕೆ ಕೊಡಲು ಕರಂದ್ಲಾಜೆ ಅವರಿಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದರು.
ಬಿಜೆಪಿಯ ಈ ವಿಭಜನೆಯ ವಾಕ್ಚಾತುರ್ಯವನ್ನು ತಮಿಳಿಗರು ಮತ್ತು ಕನ್ನಡಿಗರು ತಿರಸ್ಕರಿಸುತ್ತಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡುತ್ತಿರುವ ಸಚಿವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ ಸ್ಟಾಲಿನ್, ಪ್ರಧಾನಿಯಿಂದ ಹಿಡಿದು ಕಾರ್ಯಕರ್ತರವರೆಗೆ ಬಿಜೆಪಿಯ ಎಲ್ಲರೂ ಈ ಕೊಳಕು ವಿಭಜನೆ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಇದೇ ವೇಳೆ ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು, ತಮಿಳುನಾಡಿನ ಜನರನ್ನು ಉಗ್ರಗಾಮಿಗಳೆಂದು ಸಾಮಾನ್ಯೀಕರಿಸುವ ಉದ್ದೇಶದಿಂದ ಸಚಿವರ ದ್ವೇಷದ ಭಾಷಣವನ್ನು ಬಲವಾಗಿ ಖಂಡಿಸುತ್ತೇನೆ. ವಿಭಜನೆ ಉದ್ದೇಶದಂತಹ ಇಂತಹ ದ್ವೇಷ ಭಾಷಣಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಇಸಿಐಗೆ ಮನವಿ ಮಾಡಿದರು.
ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು 'ವಿಷಕಾರಿ' ಎಂದು ಬಣ್ಣಿಸಿದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಘಟನೆಯ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿರುವಾಗ ಬಿಜೆಪಿ ಸಚಿವರು ಇಂತಹ ಅತಿರೇಕದ ಹೇಳಿಕೆ ಯಾಕೆ ನೀಡಿದರು. ಬಿಜೆಪಿಯ ಶೋಚನೀಯ ವಿಭಜನೆ ರಾಜಕೀಯವು ಕೆಳಮಟ್ಟಕ್ಕೆ ಇಳಿದಿದೆ. ತಮಿಳರು ಮತ್ತು ನಮ್ಮ ಕನ್ನಡಿಗ ಸಹೋದರರು ಮತ್ತು ಸಹೋದರಿಯರು ಬಿಜೆಪಿಯ ಅಸಹ್ಯಕರ ಹೇಳಿಕೆಗಳನ್ನು ತಿರಸ್ಕರಿಸುತ್ತಾರೆ ಎಂದು ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
Advertisement