ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನದ ವಿಚಾರದಲ್ಲಿ ಆಮ್ ಆದ್ಮಿ ಪಕ್ಷ ಸುಳ್ಳಿನ ಕಂತೆಗಳನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಭ್ರಷ್ಟರು ಜೈಲಿಗೆ ಹೋಗುತ್ತಾರೆ ಎಂದು ಪ್ರತಿಪಾದಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಾತನಾಡಿ, ಹಗರಣಗಳಲ್ಲಿ ತೊಡಗಿರುವಾಗ ರಾಜಕಾರಣಿಗಳು ಪರಸ್ಪರ ಸಹಾಯ ಮಾಡಲು ಪರಸ್ಪರರ ಬೆನ್ನು ಕೆರೆದುಕೊಳ್ಳುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ ಇದು ಬದಲಾಗಿದೆ ಎಂದರು.
ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿರುವುದರಿಂದ ಮತ್ತು ಸಾಮಾನ್ಯ ವ್ಯಕ್ತಿಯಲ್ಲ ಎನ್ನುವ ಕಾರಣಕ್ಕಾಗಿ ಅವರನ್ನು ಕೈಬಿಡಬೇಕೇ ಎಂದು ಪ್ರಶ್ನಿಸಿದ ಅವರು, ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಕಿಂಗ್ಪಿನ್ ಆಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಜ್ರಿವಾಲ್ ಅವರ ರಕ್ಷಣೆಗೆ ರ್ಯಾಲಿ ಮಾಡುತ್ತಿದ್ದು, ಕೇಜ್ರಿವಾಲ್ ಅವರ ಬಂಧನವು ಕೇಂದ್ರ ಸರ್ಕಾರದ ದಮನಕಾರಿ ನೀತಿಯ ಭಾಗವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದು ಸಹೋದರತ್ವವನ್ನು ಪ್ರದರ್ಶಿಸುವ ಕಳ್ಳರ ಪ್ರಕರಣವಾಗಿದೆ. ಅವರು ಭ್ರಷ್ಟರ ನಾಯಕ, ಎಎಪಿ ನಾಯಕರು ಈ ವಿಷಯದಲ್ಲಿ ಸುಳ್ಳಿನ ಕಥೆ ಕಟ್ಟುತ್ತಿದ್ದಾರೆ ಎಂದು ಹೇಳಿದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇದು ಅವರ ನಡುವಿನ 'ಜಾಮೀನು ಬಾಂಡ್' ಎಂದು ಲೇವಡಿ ಮಾಡಿದರು. ಅವರ ಹಡಗುಗಳು ಮುಳುಗುತ್ತಿದ್ದಂತೆ ಅವರೆಲ್ಲರೂ ಒಂದಾಗುತ್ತಿದ್ದಾರೆ ಎಂದರು.
ರಾಜಕೀಯ ದ್ವೇಷದಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎನ್ನುವ ಎಎಪಿ ನಾಯಕರ ಆರೋಪವನ್ನು ತಳ್ಳಿಹಾಕಿದ ಪಾತ್ರಾ, ಜನರು ನ್ಯಾಯಾಲಯಗಳನ್ನು ನಂಬುತ್ತಾರೆಯೇ ಅಥವಾ ಅವರನ್ನು ನಂಬುತ್ತಾರೆಯೇ?. ಪ್ರತಿಯೊಬ್ಬ ಕಳ್ಳನು ಸಿಕ್ಕಿಬಿದ್ದಾಗ ತಾನು ಮುಗ್ಧ ಎಂದೇ ಹೇಳಿಕೊಳ್ಳುತ್ತಾನೆ ಎಂದು ಹೇಳಿದರು.
ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ ಅವರ ಭದ್ರತೆ ಬಗ್ಗೆ ಸಚಿವೆ ಅತಿಶಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ‘ದೆಹಲಿಯ ಮುಖ್ಯಮಂತ್ರಿಯಾಗಿರುವುದರಿಂದ ಕೇಜ್ರಿವಾಲ್ ಅವರಿಗೆ Z+ ಭದ್ರತೆ ಇದೆ. ಈಗ ಅವರು ಇ.ಡಿ ವಶದಲ್ಲಿ ಇದ್ದಾರೆ. ಅವರ ಸುರಕ್ಷತೆಯ ಹೊಣೆ ಯಾರಿಗೆ ಇದೆ? ಅವರಿಗೆ ನೀಡಲಾದ ಭದ್ರತೆ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಎಎಪಿ ನಾಯಕ ತಾನು ರಾಜಕೀಯವನ್ನು ಶುದ್ಧೀಕರಿಸಲು ಪ್ರವೇಶಿಸಿದ್ದೇನೆ ಎಂದು ಹೇಳಿಕೊಂಡರೂ, ಅರಮನೆಯಲ್ಲಿ ವಾಸಿಸಲು ಮತ್ತು ಭದ್ರತಾ ಕವಚದಲ್ಲಿ ತಿರುಗಾಡಲು ಪ್ರಾರಂಭಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಲುಕಿರುವವರನ್ನು ಬಂಧಿಸಲು ಇದು ಸಕಾಲ' ಎಂದು ಪಾತ್ರಾ ಪ್ರತಿಪಾದಿಸಿದರು.
Advertisement