ನವದೆಹಲಿ: ತಮ್ಮ ಕೃತ್ಯಗಳಿಂದಲೇ ಅರವಿಂದ್ ಕೇಜ್ರಿವಾಲ್ ಬಂಧನವಾಗಿದೆ ಎಂದು ಖ್ಯಾತ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಶುಕ್ರವಾರ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಣ್ಣಾಹಜಾರೆ, ಬಹಳ ವರ್ಷಗಳ ಹಿಂದೆಯೇ ಇಂತಹ ವಿವಾದಾತ್ಮಕ ನೀತಿ ಮಾಡದಂತೆ, ಅದರಿಂದ ದೂರವಿರುವಂತೆ ಎಚ್ಚರಿಸಿದ್ದೆ ಎಂದು ಹೇಳಿದ್ದಾರೆ.
ಒಂದು ದಶಕದ ಹಿಂದೆ ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಖವಾಗಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಶುಕ್ರವಾರ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ಗೆ ಇಂತಹ ನೀತಿಯನ್ನು ಮಾಡದಂತೆ ದೂರವಿರಿ ಎಂದು ಎಚ್ಚರಿಸಿದ್ದರು. ಕೇಜ್ರಿವಾಲ್ ಅವರೊಂದಿಗೆ 2010 ರ ದಶಕದ ಆರಂಭದಲ್ಲಿ ಲೋಕಪಾಲ್ ಚಳವಳಿಯ ನೇತೃತ್ವ ವಹಿಸಿದ್ದ ಹಜಾರೆ, ಇದೀಗ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಸ್ವಯಂಕೃತ ಅಪರಾಧದಳಿಂದಾಗಿಯೇ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದಾರೆ.
"ನಮ್ಮ ಕೆಲಸ ಅಬಕಾರಿ ನೀತಿ ಮಾಡುವುದಲ್ಲ ಎಂದು ನಾನು ಅವರಿಗೆ ಹೇಳಿದ್ದೆ. ಮದ್ಯ ಕೆಟ್ಟದ್ದು ಎಂದು ಚಿಕ್ಕ ಮಗುವಿಗೂ ಗೊತ್ತು. ಈ (ಅಬಕಾರಿ ನೀತಿ) ಸಮಸ್ಯೆಯಿಂದ ದೂರವಿರಲು ನಾನು ಕೇಳಿದ್ದೆ. ಆದರೆ ಅವನು ಮುಂದೆ ಹೋಗಿ ಪಾಲಿಸಿ ಮಾಡಿದ್ದಾನೆ ಎಂದು ಮಹಾರಾಷ್ಟ್ರದ ತಮ್ಮ ಗ್ರಾಮ ರಾಲೇಗಣ್ ಸಿದ್ಧಿಯಲ್ಲಿ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡುವ ವೇಳೆ ಅಣ್ಣಾ ಹಜಾರೆ ಹೇಳಿದರು.
''ಹೆಚ್ಚು ದುಡ್ಡು ಗಳಿಸುತ್ತೇನೆ ಎಂದುಕೊಂಡಿದ್ದ ಅವರು ಈ ನೀತಿಯನ್ನು ಮಾಡಿದ್ದಾರೆ. ನನಗೆ ಬೇಸರವಾಗಿ ಎರಡು ಬಾರಿ ಈ ಕುರಿತು ಪತ್ರ ಕೂಡ ಬರೆದಿದ್ದೆ. ಒಂದು ಕಾಲದಲ್ಲಿ ನನ್ನೊಂದಿಗೆ ದುಡಿದು ಮದ್ಯದ ವಿರುದ್ಧ ದನಿ ಎತ್ತಿದ ಕೇಜ್ರಿವಾಲ್ ಅವರಂತಹ ವ್ಯಕ್ತಿ ಈಗ ಇದ್ದಾರೆ ಎಂದು ಬೇಸರವಾಯಿತು. ಅಬಕಾರಿ ನೀತಿಯನ್ನು ರೂಪಿಸುವುದು, ಅವರ ಕಾರ್ಯಗಳಿಂದ ಅವರನ್ನು ಬಂಧಿಸಲಾಯಿತು, ಅವರು ಏನನ್ನೂ ಮಾಡದಿದ್ದರೆ, ಅವರನ್ನು ಬಂಧಿಸುವ ಪ್ರಶ್ನೆಯೇ ಇರುತ್ತಿರಲಿಲ್ಲ, ಈಗ ಕಾನೂನು ಅದರ ಹಾದಿಯನ್ನು ತೆಗೆದುಕೊಳ್ಳುತ್ತದೆ ಮತ್ತು ಸರ್ಕಾರವು ಏನು ಅಗತ್ಯವೋ ಅದನ್ನು ಮಾಡುತ್ತದೆ ಎಂದು ಹಜಾರೆ ಹೇಳಿದರು.
ಗುರುವಾರ ರಾತ್ರಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು.
Advertisement