ಇಂದೋರ್: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರಿಗೆ ಮಧ್ಯಪ್ರದೇಶದ ಇಂದೋರ್ ಕೌಟುಂಬಿಕ ನ್ಯಾಯಾಲಯವು ತಕ್ಷಣವೇ ತನ್ನ ಗಂಡನ ಮನೆಗೆ ಮರಳುವಂತೆ ನಿರ್ದೇಶಿಸಿದೆ.
ಸಂಪ್ರದಾಯ ಬದ್ಧವಾದ 'ಸಿಂಧೂರ' (ಕುಂಕುಮ) ಧರಿಸುವುದು ಮದುವೆಯಾದ (ಹಿಂದೂ) ಮಹಿಳೆಯ ಕರ್ತವ್ಯವಾಗಿದೆ ಎಂದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಐದು ವರ್ಷಗಳ ಹಿಂದೆ ತನ್ನ ಪತ್ನಿ ವಿವಾಹದಿಂದ ಹೊರನಡೆದ ನಂತರ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ತನ್ನ ಹಕ್ಕುಗಳನ್ನು ಮರುಸ್ಥಾಪಿಸಲು ಕೋರಿ ಪತಿಯ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಇಂದೋರ್ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎನ್ಪಿ ಸಿಂಗ್ ಅವರು ಈ ರೀತಿಯ ಅಭಿಪ್ರಾಯಪಟ್ಟಿದ್ದಾರೆ.
ಅರ್ಜಿದಾರರ ವಕೀಲ ಶುಭಂ ಶರ್ಮಾ ಅವರು ತಮ್ಮ ಕಕ್ಷಿದಾರರು 2017 ರಲ್ಲಿ ವಿವಾಹವಾಗಿದ್ದು, ದಂಪತಿಗೆ 5 ವರ್ಷದ ಮಗನಿದ್ದಾನೆ ಎಂದು ಹೇಳಿದ್ದರು.
ಮಾರ್ಚ್ 1 ರ ತಮ್ಮ ಆದೇಶದಲ್ಲಿ, ನ್ಯಾಯಾಧೀಶರು, "ಮಹಿಳೆಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದಾಗ, ಆಕೆ ಮನೆಯಲ್ಲಿ ಕುಂಕುಮ ಧರಿಸುತ್ತಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಿಂಧೂರ ಹೆಂಡತಿಯ ಧಾರ್ಮಿಕ ಕರ್ತವ್ಯವಾಗಿದ್ದು, ಇದು ಮಹಿಳೆ ವಿವಾಹಿತಳು ಎಂಬುದನ್ನು ತೋರಿಸುತ್ತದೆ. ಮಹಿಳೆಯ ಸಂಪೂರ್ಣ ಹೇಳಿಕೆ ಸಲ್ಲಿಕೆಯನ್ನು ಪರಿಶೀಲಿಸಿದ ನಂತರ, ಆಕೆಯನ್ನು ಪತಿ ತೊರೆದಿರಲಿಲ್ಲ.. ಬದಲಿಗೆ ಆಕೆಯೇ ಪತಿಯಿಂದ ದೂರಾಗಿ ವಿಚ್ಛೇದನವನ್ನು ಬಯಸಿದ್ದಳು ಎಂಬುದು ಸ್ಪಷ್ಟವಾಯಿತು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪತ್ನಿ ಧರ್ಮ ನಿಭಾಸುತ್ತಿರಲಿಲ್ಲ ಎಂದ ಪತಿ
ಇನ್ನು ಪತ್ನಿಯ ಆರೋಪಗಳನ್ನು ನಿರಾಕರಿಸಿರುವ ಪತಿ, ತನ್ನ ಪತ್ನಿ ಮನೆಯಲ್ಲಿ ತನ್ನ ಕರ್ತವ್ಯಗಳನ್ನು ನಿಭಾಯಿಸುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ. ಇತ್ತ ಪತ್ನಿ ಕೂಡ ತನ್ನ ಪತಿ ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಎರಡೂ ಕಡೆಯವರ ವಾದ ಆಲಿಸಿದ ನಂತರ ಮತ್ತು ದಾಖಲಾದ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಮಹಿಳೆ ತನ್ನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ಅಥವಾ ವರದಿಯನ್ನು ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
Advertisement