ಕಂಗನಾ ರಣಾವತ್ ಕುರಿತು ಆಕ್ಷೇಪಾರ್ಹ ಹೇಳಿಕೆ: ಲೋಕಸಭೆ ಅಭ್ಯರ್ಥಿಗಳ ಪಟ್ಟಿಯಿಂದ ಸುಪ್ರಿಯಾ ಶ್ರಿನೇತಾ ಕೈ ಬಿಟ್ಟ ಕಾಂಗ್ರೆಸ್!
ನವದೆಹಲಿ: ನಟಿ ಕಂಗನಾ ರಣವತ್ ಕುರಿತು ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮದ ಅಧ್ಯಕ್ಷೆ ಸುಪ್ರಿಯಾ ಶ್ರಿನೇತಾ ಅವರನ್ನು ಉತ್ತರ ಪ್ರದೇಶದ ಮಹಾರಾಜ್ಗಂಜ್ ಕ್ಷೇತ್ರದಿಂದ ಕಣಕ್ಕಿಳಿಸದಿರಲು ಪಕ್ಷವು ನಿರ್ಧರಿಸಿದೆ. ಅವರ ಬದಲಿಗೆ ವೀರೇಂದ್ರ ಚೌಧರಿ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್ ಅವರನ್ನು ಘೋಷಿಸಿದ ನಂತರ ಸುಪ್ರಿಯಾ ಶ್ರಿನೇತಾ ನೀಡಿದ ವಿವಾದಾತ್ಮಕ ಹೇಳಿಕೆಗಳ ನಡುವೆ ಈ ಬೆಳವಣಿಗೆಯಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇತಾ ಇನ್ಸ್ಟಾಗ್ರಾಮ್ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದರು. ವ್ಯಾಪಕ ಜನಾಕ್ರೋಶದ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು.
“ಹಲವು ಜನರು ನನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳಿಗೆ ಪ್ರವೇಶ ಹೊಂದಿದ್ದು, ಅವರಲ್ಲಿ ಯಾರೋ ಈ ರೀತಿಯ ಅತ್ಯಂತ ಅನುಚಿತ ಪೋಸ್ಟ್ ಮಾಡಿದ್ದಾರೆ ಎಂದು ಶ್ರಿನೇತಾ ಹೇಳಿದ್ದರು. ಈ ಕುರಿತು ಚುನಾವಣಾ ಆಯೋಗವು ಮಾರ್ಚ್ 27 ರಂದು ಶ್ರಿನೇತಾ ಅವರಿಗೆ ಶೋಕೇಸ್ ನೋಟಿಸ್ ನೀಡಿತ್ತು. ಕಾಂಗ್ರೆಸ್ ಬುಧವಾರ ಉತ್ತರ ಪ್ರದೇಶದ ನಾಲ್ಕು ಕ್ಷೇತ್ರಗಳು ಸೇರಿದಂತೆ 14 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತು. ಆದಾಗ್ಯೂ, 2019 ರಲ್ಲಿ ಮಹಾರಾಜ್ಗಂಜ್ನಿಂದ ಸ್ಪರ್ಧಿಸಿದ್ದ ಶ್ರಿನೇತಾ ಅವರ ಹೆಸರು ಪಟ್ಟಿಯಲ್ಲಿ ಇಲ್ಲ. 2019 ರಲ್ಲಿ, ಶ್ರಿನೇತಾ ಅವರು ಮಹಾರಾಜ್ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಪಂಕಜ್ ಚೌಧರಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.