ನವದೆಹಲಿ: ಪಟ್ಟಭದ್ರ ಹಿತಾಸಕ್ತಿಗಳ ಗುಂಪಿನ ಬಗ್ಗೆ ವಕೀಲರು ಸಿಜೆಐ ಗೆ ಪತ್ರ ಬರೆದಿರುವ ವಿಷಯವಾಗಿ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿಯವರ ನಿರ್ಲಜ್ಜತನ ನ್ಯಾಯಾಂಗವನ್ನು ಸಮರ್ಥಿಸಿಕೊಳ್ಳುವ ಹೆಸರಿನಲ್ಲಿ ನ್ಯಾಯಾಂಗದ ಮೇಲಿನ ದಾಳಿಯನ್ನು ಸಂಘಟಿಸುತ್ತಿದೆ, ಇದು ಬೂಟಾಟಿಕೆಯ ಪರಮಾವಧಿ ಎಂದು ಕಾಂಗ್ರೆಸ್ ಹೇಳಿದೆ.
600 ವಕೀಲರು ಸಿಜೆಐ ಗೆ ಪತ್ರ ಬರೆದು ಪಟ್ಟ ಭದ್ರ ಹಿತಾಸಕ್ತಿಯನ್ನು ಹೊಂದಿರುವ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದ್ದು, ಕೋರ್ಟ್ ಗಳಿಗೆ ಅವಮಾನ ಮಾಡಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದರು. ಈ ವಿಷಯವಾಗಿ ಮಾತನಾಡಿದ್ದ ಮೋದಿ, ಬೊಬ್ಬೆ ಹೊಡೆಯುವುದು ಮತ್ತು ಇತರರನ್ನು ಬೆದರಿಸುವುದು ಕಾಂಗ್ರೆಸ್ ನ ಪುರಾತನ ಸಂಸ್ಕೃತಿ ಎಂದು ಲೇವಡಿ ಮಾಡಿದ್ದರು.
ಪ್ರಧಾನಿ ಲೇವಡಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ, ಪ್ರಭಾರಿ, ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ನ್ಯಾಯಾಂಗವನ್ನು ರಕ್ಷಿಸುವ ಹೆಸರಿನಲ್ಲಿ ನ್ಯಾಯಾಂಗದ ಮೇಲಿನ ದಾಳಿಯನ್ನು ಸಂಘಟಿಸುವ ಮತ್ತು ಸಮನ್ವಯಗೊಳಿಸುವ ಪ್ರಧಾನಿಯವರ ನಿರ್ಲಜ್ಜತನವು ಬೂಟಾಟಿಕೆಯ ಪರಮಾವಧಿಯದ್ದಾಗಿದೆ" ಎಂದು ಹೇಳಿದ್ದಾರೆ.
"ಇತ್ತೀಚಿನ ವಾರಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಹೊಡೆತಗಳನ್ನು ನೀಡಿದೆ. ಈ ಪೈಕಿ ಚುನಾವಣಾ ಬಾಂಡ್ಸ್ ಯೋಜನೆಯು ಕೇವಲ ಒಂದು ಉದಾಹರಣೆಯಾಗಿದೆ" ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
Advertisement