ನವದೆಹಲಿ: ಅರೇಬಿಯನ್ ಸಮುದ್ರದಲ್ಲಿ ಮತ್ತೆ ಬಾಲ ಬಿಚ್ಚಿದ್ದ ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದ್ದು, ಸತತ ಕಾರ್ಯಾಚರಣೆ ನಡೆಸಿ 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ ಮಾಡಿದ್ದಲ್ಲದೇ ಇರಾನ್ ಮೂಲದ ಸರಕ ಸಾಗಾಣಿಕಾ ಹಡಗನ್ನು ಬಂಧಮುಕ್ತಗೊಳಿಸಿದೆ.
ಇರಾನ್ ಮೂಲದ ಮೀನುಗಾರಿಕಾ ಹಡಗು (ಎಫ್ವಿ), ಅಲ್-ಕಂಬರ್ ಮೇಲೆ ದಾಳಿ ನಡೆಸಿದ್ದ ಸೊಮಾಲಿಯ ಕಡಲ್ಗಳ್ಳರು ಹಡಗನ್ನು ಹೈಜಾಕ್ ಮಾಡಿದ್ದರು. ಈ ವಿಚಾರ ತಿಳಿಯುತ್ತಲೇ ಭಾರತೀಯ ನೌಕಾಪಡೆಯ ಐಎನ್ಎಸ್ ಸುಮೇಧಾ ಮತ್ತು ಐಎನ್ಎಸ್ ತ್ರಿಶೂಲ್ ನೌಕೆಗಳು ಅಲ್-ಕಂಬರ್ ಹಡಗನ್ನು ಸುತ್ತುವರೆದು ಸುಮಾರು 12 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿತು. ಈ ವೇಳೆ ಸೊಮಾಲಿಯಾ ಕಡಲ್ಗಳ್ಳರು ಶರಣಾಗುವಂತೆ ಮಾಡಲಾಯಿತು.
ಈ ಹಡಗಿನಲ್ಲಿ ಸುಮಾರು 23 ಜನ ಪಾಕಿಸ್ತಾನ ಮೂಲದ ಪ್ರಜೆಗಳಿದ್ದು, ಎಲ್ಲರನ್ನೂ ನೌಕಾಪಡೆ ರಕ್ಷಣೆ ಮಾಡಿದೆ. ಪ್ರಸ್ತುತ ಹಡಗನ್ನು ಸೇನೆ ತನ್ನ ವಶಕ್ಕೆ ಪಡೆದಿದ್ದು, ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಲು ಸುರಕ್ಷಿತ ಪ್ರದೇಶಕ್ಕೆ ಬೆಂಗಾವಲು ಮಾಡಲು ಭಾರತೀಯ ನೌಕಾಪಡೆಯ ತಜ್ಞ ತಂಡಗಳು ಪ್ರಸ್ತುತ ಹಡಗಿನ ಸಂಪೂರ್ಣ ನೈರ್ಮಲ್ಯ ಮತ್ತು ಸಮುದ್ರ ಯೋಗ್ಯತೆಯ ತಪಾಸಣೆಗಳನ್ನು ಕೈಗೊಳ್ಳುತ್ತಿವೆ ಎಂದು ನೌಕಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತೀಯ ನೌಕಾಪಡೆಯ ಪ್ರಕಾರ, ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಅಲ್ ಕಂಬರ್ ಹಡಗನ್ನು ಹತ್ತಿದಾಗ ಹಡಗು ಸೊಕೊಟ್ರಾದ ನೈಋತ್ಯಕ್ಕೆ ಸರಿಸುಮಾರು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು. ವಿಚಾರ ಭಾರತೀಯ ನೌಕಾಪಡೆಗೆ ತಿಳಿಯುತ್ತಲೇ ಐಎನ್ಎಸ್ ಸುಮೇಧಾ ಮತ್ತು ಐಎನ್ಎಸ್ ತ್ರಿಶೂಲ್ ನೌಕೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು.
ಎರಡೂ ನೌಕೆಗಳು ಅಲ್ ಕಂಬರ್ ಹಡಗನ್ನು ಸುತ್ತುವರೆದು ಮಾರ್ಚ್ 29 ರ ಮುಂಜಾನೆ ಹಡಗಿನೊಳಗೆ ಭಾರತೀಯ ನೌಕಾಪಡೆಯ ಸೈನಿಕರು ನುಗ್ಗಿ ಸೊಮಾಲಿಯ ಕಡಲ್ಗಳ್ಳರ ವಿರುದ್ಧ ಕಾರ್ಯಾಚರಣೆ ನಡೆಸಿ ಶರಣಾಗುವಂತೆ ಮಾಡಿದರು.
Advertisement