ಕೊಚ್ಚಿ: ಕೇರಳ ಕರಾವಳಿಯಲ್ಲಿ ಆರು ಭಾರತೀಯ ಸಿಬ್ಬಂದಿಗಳೊಂದಿಗೆ ಇರಾನ್ ಮೀನುಗಾರಿಕೆ ಹಡಗನ್ನು ಭಾರತೀಯ ಕೋಸ್ಟ್ ಗಾರ್ಡ್ ವಶಕ್ಕೆ ತೆಗೆದುಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ಭಾರತೀಯ ಕೋಸ್ಟ್ ಗಾರ್ಡ್, ಕ್ಷಿಪ್ರ "ಸಮುದ್ರ-ವಾಯು" ಸಮನ್ವಯ ಕಾರ್ಯಾಚರಣೆಯ ನಂತರ ಹಡಗನ್ನು ಭಾನುವಾರ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.
ತಮಿಳುನಾಡಿನ ಕನ್ಯಾಕುಮಾರಿ ಮೂಲದ ಆರು ಮೀನುಗಾರರು ಇರಾನ್ ಮೂಲದ ಸೈಯದ್ ಸೌದ್ ಅನ್ಸಾರಿ ಎಂಬುವವರ ಬಳಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಮೀನುಗಾರರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ಅಲ್ಲದೆ ಅವರ ಪಾಸ್ಪೋರ್ಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಸಿಬ್ಬಂದಿ ಆರೋಪಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಬೋಟ್ನ ಮಾಲೀಕರು ಇರಾನ್ ಪ್ರಜೆಯಾಗಿದ್ದು, ಅವರು ತಮಿಳುನಾಡಿನಿಂದ ಭಾರತೀಯ ಮೀನುಗಾರರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
"ಭಾರತೀಯ ಕೋಸ್ಟ್ ಗಾರ್ಡ್ ಮೇ 5 ರಂದು ಕೇರಳ ಕರಾವಳಿಯ ಬೇಪೋರ್ನ ಪಶ್ಚಿಮಕ್ಕೆ ಆರು ಭಾರತೀಯ ಸಿಬ್ಬಂದಿಯೊಂದಿಗೆ ಇರಾನಿನ ಮೀನುಗಾರಿಕಾ ಹಡಗನ್ನು ವಶಕ್ಕೆ ತೆಗೆದುಕೊಂಡಿದೆ. ಕೋಸ್ಟ್ ಗಾರ್ಡ್ ತನ್ನ ಹಡುಗಗಳು ಮತ್ತು ಹೆಲಿಕಾಪ್ಟರ್ ಗಳನ್ನು ತ್ವರಿತವಾಗಿ ನಿಯೋಜಿಸಿ ಇರಾನ್ ಹಡಗನ್ನು ವಶಕ್ಕೆ ಪಡೆದಿದೆ" ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Advertisement