ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಚುನಾವಣಾ ಭಾಷಣಗಳಲ್ಲಿ ಕೈಗಾರಿಕೋದ್ಯಮಿಗಳಿಂದ ರಾಹುಲ್ ಗಾಂಧಿ ಕಪ್ಪು ಹಣ ಪಡೆದಿದ್ದಾರೆ ಎಂದು ಆರೋಪಿಸುವ ಮೂಲಕ ಅದಾನಿ-ಅಂಬಾನಿ ಕಪ್ಪು ಹಣ ಸಂಗ್ರಹಿಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಬುಧವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಳ ಸಮಯದಿಂದ ಸತ್ಯಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ಅಂತಿಮವಾಗಿ ಸತ್ಯ ಗೆಲ್ಲುತ್ತದೆ ಎಂದು ಗೆಹ್ಲೋಟ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅದಾನಿ-ಅಂಬಾನಿ ಬಳಿ ಅಪಾರ ಪ್ರಮಾಣದ ಕಪ್ಪುಹಣವಿದೆ ಎಂದು ಪ್ರಧಾನಿ ಮೋದಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅದನ್ನು ಅವರು ಕಳೆದ 10 ವರ್ಷಗಳಲ್ಲಿ ಮುಟ್ಟುವ ಧೈರ್ಯ ಮಾಡಲಿಲ್ಲ" ಎಂದು ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.
"ಈಗ, ಮೋದಿ ಜೀ ಅವರು ಕರೆನ್ಸಿ ನೋಟುಗಳಿಂದ ತುಂಬಿದ ಗೋಣಿಚೀಲಗಳು ಮತ್ತು ಟೆಂಪೋಗಳನ್ನು ಯಾರ ಸ್ಥಳದಲ್ಲಿ ಖಾಲಿ ಮಾಡಲಾಯಿತು ಎಂಬುದನ್ನು ಹೇಳಬೇಕು?" ಎಂದು ಗೆಹ್ಲೋಟ್ ಆಗ್ರಹಿಸಿದ್ದಾರೆ.
"ರಾಹುಲ್ ಗಾಂಧಿ ಬಹಳ ಸಮಯದಿಂದ ಸತ್ಯಕ್ಕಾಗಿ ಹೋರಾಡುತ್ತಿದ್ದಾರೆ. ಅಂತಿಮ ಸತ್ಯ ಗೆಲ್ಲುತ್ತದೆ, ಜೂನ್ 4 ರಂದು ನ್ಯಾಯ ಮತ್ತು ಸತ್ಯಕ್ಕೆ ಜಯ ಸಿಗುತ್ತದೆ" ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಕಳೆದ ಐದು ವರ್ಷಗಳಿಂದ ಅದಾನಿ- ಅಂಬಾನಿ ವಿಷಯ ಪ್ರಸ್ತಾಪಿಸುತ್ತಿದ್ದ ಶಹಜಾದ್(ರಾಹುಲ್ ಗಾಂಧಿ) ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಅವರ ಹೆಸರನ್ನು ಪ್ರಸ್ತಾಪಿಸುವುದನ್ನು ಏಕೆ ನಿಲ್ಲಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಟೆಂಪೋಗಳಲ್ಲಿ ಕಪ್ಪು ಹಣದ ಎಷ್ಟು ಮೂಟೆಗಳನ್ನು ನೀವು ಪಡೆದಿದ್ದೀರಿ ಎಂದು ದೇಶಕ್ಕೆ ಉತ್ತರಿಸಬೇಕಿದೆ ಎಂದು ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿ ಹೇಳಿದ್ದರು.
Advertisement