ಪುಣೆ: 2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಶುಕ್ರವಾರ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಏತನ್ಮಧ್ಯೆ, ಇತರ ಮೂವರು ವೀರೇಂದ್ರಸಿನ್ಹ್ ತಾವ್ಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ.
ಸುಮಾರು ಮೂರು ವರ್ಷಗಳ ವಿಚಾರಣೆಯ ನಂತರ ಸೆಷನ್ಸ್ ನ್ಯಾಯಾಧೀಶ ಪಿ ಪಿ ಜಾಧವ್ ಇಂದು ತೀರ್ಪು ಪ್ರಕಟಿಸಿದರು.
ದೋಷಿಗಳೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟವರಾದ ಸಚಿನ್ ಅಂದೂರೆ ಹಾಗೂ ಶರದ್ ಕಲಸ್ಕರ್ಗೆ ಜೀವಾವಧಿ ಶಿಕ್ಷೆ ಹಾಗೂ ರೂ 5 ಲಕ್ಷ ದಂಡ ವಿಧಿಸಲಾಗಿದೆ. ಡಾ ವೀರೇಂದ್ರ ಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಲೇಕರ್ ಅವರನ್ನು ಖುಲಾಸೆಗೊಳಿಸಲಾಗಿದೆ,
ಸಾಮಾಜಿಕ ಕಾರ್ಯಕರ್ತ ಹಾಗೂ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿ ಮುಖ್ಯಸ್ಥ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ದುಷ್ಕರ್ಮಿಗಳ ಗ್ಯಾಂಗ್ನ ಗುಂಪು ಈ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿತ್ತು.
ಪುಣೆಯಲ್ಲಿ ದಾಭೋಲ್ಕರ್ ಅವರ ಹತ್ಯೆ ಬಳಿಕ ಮತ್ತಷ್ಟು ವಿಚಾರವಾದಿಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಕೊಲೆಗಳು ನಡೆದಿದ್ದವು. 2015ರ ಫೆಬ್ರವರಿಯಲ್ಲಿ ಗೋವಿಂದ್ ಪನ್ಸಾರೆ, ಅದೇ ವರ್ಷದ ಆಗಸ್ಟ್ನಲ್ಲಿ ಕರ್ನಾಟಕದ ಸಂಶೋಧಕ ಎಂಎಂ ಕಲಬುರ್ಗಿ ಹಾಗೂ 2017ರ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಮನೆಯ ಹೊರಗೆ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಿಗೆ ಸಾಮ್ಯತೆ ಇದ್ದು, ಒಂದೇ ಸಂಘಟನೆಯವರ ಕೈವಾಡ ಇವುಗಳಲ್ಲಿ ಇವೆ ಎಂದು ಆರೋಪಿಸಲಾಗಿತ್ತು.
ದಾಭೋಲ್ಕರ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಪುಣೆ ಪೊಲೀಸರು ನಡೆಸಿದ್ದರು. ಆದರೆ, 2014ರಲ್ಲಿ ಬಾಂಬೆ ಹೈಕೋರ್ಟ್ ಆದೇಶದ ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. 2016ರ ಜೂನ್ನಲ್ಲಿ ಅದು ಹಿಂದೂ ಬಲ ಪಂಥೀಯ ಸಂಘಟನೆ ಸನಾತನ ಸಂಸ್ಥೆ ಜೊತೆ ನಂಟು ಹೊಂದಿರುವ ಇಎನ್ಟಿ ಸರ್ಜನ್ ಡಾ ವೀರೇಂದ್ರಸಿಂಹ ತವಾಡೆಯನ್ನು ಬಂಧಿಸಿತ್ತು.
ದಾಭೋಲ್ಕರ್ ಹತ್ಯೆಯ ಮಾಸ್ಟರ್ ಮೈಂಡ್ಗಳಲ್ಲಿ ತವಾಡೆ ಕೂಡ ಒಬ್ಬರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ತವಾಡೆ ಮತ್ತು ಇತರೆ ಆರೋಪಿಗಳು ನಂಟು ಹೊಂದಿರುವ ಸನಾತನ ಸಂಸ್ಥಾ ಸಂಘಟನೆಯು ದಾಭೋಲ್ಕರ್ ಅವರ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ ಸಮಿತಿ ನಡೆಸುತ್ತಿದ್ದ ಚಟುವಟಿಕೆಗಳನ್ನು ವಿರೋಧಿಸುತ್ತಿತ್ತು ಎಂದು ಅದು ತಿಳಿಸಿತ್ತು.
Advertisement