ಅಧೀರ್ ರಂಜನ್ ಚೌಧರಿ - ಮಮತಾ ಬ್ಯಾನರ್ಜಿ
ಅಧೀರ್ ರಂಜನ್ ಚೌಧರಿ - ಮಮತಾ ಬ್ಯಾನರ್ಜಿ

ರಾಷ್ಟ್ರ ಮಟ್ಟದಲ್ಲಿ ನಾವು INDIA ಬಣದ ಭಾಗ- ಮಮತಾ; 'ಅವಕಾಶವಾದಿ' ಎಂದ ಅಧೀರ್ ರಂಜನ್

ಟಿಎಂಸಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟದ ಭಾಗವಾಗಿದ್ದು, ಮೈತ್ರಿ ಮುಂದುವರಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
Published on

ತಮ್ಲುಕ್‌: ನಿನ್ನೆಯಷ್ಟೇ ಅಧಿಕಾರಕ್ಕೆ ಬಂದ ನಂತರ ಇಂಡಿಯಾ ಮೈತ್ರಿಕೂಟಕ್ಕೆ ಬಾಹ್ಯಾ ಬೆಂಬಲ ನೀಡುವುದಾಗಿ ಘೋಷಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟದ ಭಾಗವಾಗಿದ್ದು, ಮೈತ್ರಿ ಮುಂದುವರಿಸುವುದಾಗಿ ಗುರುವಾರ ಹೇಳಿದ್ದಾರೆ.

ಇಂದು ತಮ್ಲುಕ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಆಗಿಲ್ಲ ಎಂದು ಹೇಳಿದರು.

"ಕೆಲವರು ನಿನ್ನೆಯ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಾನು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇನೆ. ಇಂಡಿಯಾ ಮೈತ್ರಿಕೂಟ ನನ್ನ ಮೆದುಳಿನ ಕೂಸು. ನಾವು ರಾಷ್ಟ್ರ ಮಟ್ಟದಲ್ಲಿ ಒಟ್ಟಿಗೆ ಇದ್ದೇವೆ ಮತ್ತು ಒಟ್ಟಿಗೆ ಇರುತ್ತೇವೆ" ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಅಧೀರ್ ರಂಜನ್ ಚೌಧರಿ - ಮಮತಾ ಬ್ಯಾನರ್ಜಿ
INDIA ಮೈತ್ರಿಕೂಟ ಸರ್ಕಾರ ರಚನೆಗೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಶ್ಚಿಮ ಬಂಗಾಳದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಘಟಕಗಳು ಕೈಜೋಡಿಸಿ ರಾಜ್ಯದಲ್ಲಿ ಬಿಜೆಪಿಗೆ ಸಹಾಯ ಮಾಡಿವೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.

"ಬಂಗಾಳದಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಅನ್ನು ಲೆಕ್ಕಿಸಬೇಡಿ. ಅವರು ನಮ್ಮೊಂದಿಗಿಲ್ಲ, ಅವರು ಇಲ್ಲಿ ಬಿಜೆಪಿಯೊಂದಿಗೆ ಇದ್ದಾರೆ. ನಾನು ದೆಹಲಿಯಲ್ಲಿ ಅದರ(ಇಂಡಿಯಾ ಬ್ಲಾಕ್) ಬಗ್ಗೆ ಮಾತನಾಡುತ್ತಿದ್ದೇನೆ" ಎಂದು ದೀದಿ ಹೇಳಿದರು.

ಇನ್ನು ಮಮತಾ ಅವರ ಈ ಘೋಷಣೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು, ಮಮತಾ ಬ್ಯಾನರ್ಜಿ ಈಗ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣವನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಅದರ ಬೆಳವಣಿಗೆಯ ವೇಗವನ್ನು ಗುರುತಿಸುತ್ತಿದ್ದಾರೆ. ಅವರು ರಾಷ್ಟ್ರ ರಾಜಕೀಯದಲ್ಲಿ ತಮ್ಮ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವ ಗುರಿ ಹೊಂದಿದ್ದಾರೆ ಎಂದು ಟೀಕಿಸಿದರು.

ಮಮತಾ ಬ್ಯಾನರ್ಜಿ ಅವರನ್ನು "ಅವಕಾಶವಾದಿ ರಾಜಕಾರಣಿ" ಎಂದು ಕರೆದ ಚೌಧರಿ, ಅವರು ಬದಲಾಗುತ್ತಿರುವ ರಾಜಕೀಯ ಸನ್ನಿವೇಶವನ್ನು ಅರಿತುಕೊಂಡ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂದರು.

"ಇಂಡಿಯಾ ಮೈತ್ರಿಕೂಟವು ಮುಂದೆ ಸಾಗುತ್ತಿದೆ ಮತ್ತು ಸರ್ಕಾರ ರಚನೆಯ ಅಂಚಿನಲ್ಲಿದೆ ಎಂಬುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಅದಕ್ಕಾಗಿಯೇ ಚಾಣಾಕ್ಷ ಮತ್ತು ಅವಕಾಶವಾದಿ ನಾಯಕಿಯಾಗಿ ಮಮತಾ ಬ್ಯಾನರ್ಜಿ ಅವರು ತಮ್ಮ ಬೆಂಬಲವನ್ನು ಮುಂಚಿತವಾಗಿ ವಿಸ್ತರಿಸಲು ನಿರ್ಧರಿಸಿದ್ದಾರೆ" ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com