ಪೋರ್ಷೆ ಕಾರು ಅಪಘಾತ ಪ್ರಕರಣ: ಇಬ್ಬರ ಸಾವಿಗೆ ಕಾರಣನಾದ ಬಾಲಕನಿಗೆ 15 ಗಂಟೆಗಳಲ್ಲಿ ಜಾಮೀನು, ಪ್ರಬಂಧ ಬರೆಯಲು ಸೂಚನೆ!
ಪುಣೆ: ಪುಣೆಯಲ್ಲಿ ಐಷಾರಾಮಿ ಕಾರು ಪೋರ್ಷೆ ಚಲಾಯಿಸಿ ಇಬ್ಬರನ್ನು ಬಲಿ ಪಡೆದ 17 ವರ್ಷದ ಬಾಲಕನಿಗೆ ಬಂಧನಕ್ಕೆ ಒಳಗಾದ 15 ಗಂಟೆಗಳಲ್ಲಿ ಜಾಮೀನು ಮಂಜೂರಾಗಿದೆ.
ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಆತನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಯೆರ್ವಾಡದಲ್ಲಿ 15 ದಿನಗಳ ಕಾಲ ಟ್ರಾಫಿಕ್ ಪೊಲೀಸ್ ಜೊತೆ ಕೆಲಸ ಮಾಡಬೇಕು ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಪ್ರಬಂಧ ಬರೆಯಬೇಕು, ಮದ್ಯವ್ಯಸನದಿಂದ ಮುಕ್ತನಾಗಲು ಚಿಕಿತ್ಸೆ ಪಡೆಯಬೇಕು, ಆಪ್ತಸಲಹೆ ಪಡೆಯಬೇಕು ಸೂಚನೆಗಳನ್ನು ನೀಡಲಾಗಿದೆ. ಆರೋಪಿ ಬಾಲಕ ಪುಣೆಯ ಪ್ರಮುಖ ರೀಟೇಲರ್ ನ ಪುತ್ರನಾಗಿದ್ದಾನೆ.
ಮಧ್ಯಪ್ರದೇಶ ಮೂಲದ 22 ವರ್ಷದ ಅನೀಶ್ ಅವಧಿಯಾ ಹಾಗೂ ಅಶ್ವಿನಿ ಎಂಬುವವರು ಸ್ನೇಹಿತರನ್ನು ಭೇಟಿ ಮಾಡಿ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದಾಗ, ಗಂಟೆಗೆ 200 ಕಿ.ಮೀ ವೇಗದಲ್ಲಿ ಬಂದ ಪೋರ್ಷೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ 20 ಅಡಿ ದೂರ ಹೋಗಿ ಬಿದ್ದ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನೆನ್ನೆ ಮಧ್ಯಾಹ್ನ 2:15ಕ್ಕೆ ಈ ಅಪಘಾತ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು, ಚಾಲಕನಿಗೆ ಮುಂದೆ ಇರುವುದು ಕಾಣದೇ ಕಾರನ್ನು ನಿಲ್ಲಿಸಿದ್ದಾನೆ. ಕಾರು ನಿಂತ ತಕ್ಷಣ ಕಾರಿನಲ್ಲಿದ್ದವರನ್ನು ಸ್ಥಳೀಯರು ಹಿಡಿದಿದ್ದಾರೆ. ಚಾಲಕನ ಹೊರತಾಗಿ ಇನ್ನೂ ಇಬ್ಬರು ಕಾರಿನಲ್ಲಿದ್ದರು ಈ ಪೈಕಿ ಓರ್ವ ಪರಾರಿಯಾಗಿದ್ದನೆ.
ಕಾರು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ 12 ನೇ ತರಗತಿಯ ಪರೀಕ್ಷೆ ಉತ್ತೀರ್ಣನಾಗಿದ್ದ ಸಂಭ್ರಮಾಚರಣೆ ಮಾಡಲು ತನ್ನ ಸ್ನೇಹಿತರೊಂದಿಗೆ ಪಬ್ ಗೆ ತೆರಳಿ ವಾಪಸ್ಸಾಗುತ್ತಿದ್ದ. ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಳ್ಳಲಿ ಆರೋಪಿಗೆ ಇನ್ನೂ 4 ತಿಂಗಳ ಅವಧಿ ಇದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ