ರಾಜಸ್ಥಾನ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿಯಿಂದ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ
ಜೈಪುರ: ರಾಜಸ್ಥಾನದ ಡಿಯೋಲಿ-ಉನಿಯಾರಾ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಬುಧವಾರ ಏರಿಯಾ ಮ್ಯಾಜಿಸ್ಟ್ರೇಟ್ ಆಗಿ ಚುನಾವಣಾ ಕರ್ತವ್ಯದಲ್ಲಿದ್ದ ಉಪವಿಭಾಗಾಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 11 ಗಂಟೆಯವರೆಗೆ ಶೇ.25ರಷ್ಟು ಮತದಾನವಾಗಿದೆ.
ಕಾಂಗ್ರೆಸ್ ಬಂಡಾಯ ನಾಯಕ ನರೇಶ್ ಮೀನಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮಾಲ್ಪುರ ಉಪವಿಭಾಗಾಧಿಕಾರಿ ಅಮಿತ್ ಚೌಧರಿ ಅವರ ಕಾಲರ್ ಹಿಡಿದು ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಾಮ್ರಾವತಾ ಗ್ರಾಮದ ನಿವಾಸಿಗಳು ಉಪಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದರು. ಗ್ರಾಮಸ್ಥರಿಗೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಬೆಂಬಲ ವ್ಯಕ್ತಪಡಿಸಿದರು.
ಆದರೆ ಉಪಚುನಾವಣೆಯ ಏರಿಯಾ ಮ್ಯಾಜಿಸ್ಟ್ರೇಟ್ ಚೌಧರಿ ಅವರು ಮತ ಚಲಾಯಿಸುವಂತೆ ಜನರನ್ನು ಮನವೊಲಿಸಲು ಗ್ರಾಮಕ್ಕೆ ಹೋದಾಗ, ಪಕ್ಷೇತರ ಅಭ್ಯರ್ಥಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಟೋಂಕ್ ಕಲೆಕ್ಟರ್ ಸೌಮ್ಯ ಝಾ ಅವರು ತಿಳಿಸಿದ್ದಾರೆ.
"ಈ ಗ್ರಾಮವು ಪ್ರಸ್ತುತ ನಗರ ಕೋಟೆ ತಹಸಿಲ್ ಅಡಿಯಲ್ಲಿ ಬರುತ್ತದೆ. ತಮ್ಮ ಗ್ರಾಮವನ್ನು ಸಮೀಪದ ಉಣಿಯಾರ ತಹಸಿಲ್ ಅಡಿಯಲ್ಲಿ ತರಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ" ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ