
ನವದೆಹಲಿ: ಭಾರತದ ರಾಷ್ಟ್ರಪತಿಗೆ ಉಡುಗೊರೆಯಾಗಿ ನೀಡಿದ್ದ ಆಫ್ರಿಕನ್ ಆನೆಯ ಬಗ್ಗೆ ಕಾಳಜಿ ತೋರುವಲ್ಲಿ ನಿರ್ಲಕ್ಷವಹಿಸಿದ ಆರೋಪದಡಿ ದೆಹಲಿ ರಾಷ್ಟ್ರೀಯ ಜೈವಿಕ ಉದ್ಯಾನದ ಸದಸ್ಯತ್ವವನ್ನು ಮೃಗಾಲಯಗಳು ಮತ್ತು ಅಕ್ವೇರಿಯಂಗಳ ಜಾಗತಿಕ ಒಕ್ಕೂಟ (WAZA) ಅಮಾನತು ಮಾಡಿದೆ.
1996ರಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರಿಗೆ ಜಿಂಬಾಬ್ವೆ ಸರ್ಕಾರ 2 ಆನೆಗಳನ್ನು ಉಡುಗೊರೆಯಾಗಿ ನೀಡಿತ್ತು. ಅವುಗಳಲ್ಲಿ ಒಂದು ಹೆಣ್ಣಾನೆ 'ಬಂಬಾಯಿ' 2005ರಲ್ಲಿ ಮೃತಪಟ್ಟಿದ್ದು, ಇನ್ನೊಂದು ಆನೆಯನ್ನು ದೆಹಲಿ ಮೃಗಾಲಯದಲ್ಲಿ ತಂದಿರಿಸಲಾಗಿತ್ತು.
ಈ ಆನೆಗೆ ಶಂಕರ ಎಂದು ಹೆಸರಿಡಲಾಗಿದೆ. ಸದ್ಯ ಈ ಆನೆಯ ಕಾಲುಗಳಿಗೆ ಚೈನ್ ಅಳವಡಿಸಲಾಗಿದ್ದು, ಆನೆಯ ಬಗ್ಗೆ ಸರಿಯಾಗಿ ಕಾಳಜಿವಹಿಸುತ್ತಿಲ್ಲ ಎಂದು ಮೃಗಾಲಯದ ವಿರುದ್ಧ ಆರೋಪಿಸಲಾಗಿದೆ.
ದೆಹಲಿ ಮೃಗಾಯಲಯದ ನಿರ್ದೇಶಕ ಸಂಜೀತ್ ಕುಮಾರ್ ಮತ್ತು ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಮೃಗಾಲಯಗಳು ಮತ್ತು ಅಕ್ವೇರಿಯಂಗಳ ಜಾಗತಿಕ ಒಕ್ಕೂಟ (WAZA), ಆನೆಯ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರಿಂದ ಮಾಹಿತಿಯನ್ನು ಕೋರಲಾಗಿತ್ತು.
ಮೇ 24 ಮತ್ತು ಜುಲೈ 24 ರಂದು ಮೃಗಾಲಯದಿಂದ ಉತ್ತರ ಪಡೆಯಲಾಗಿದೆ. ಅದನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದ ಬಳಿಕ ತಕ್ಷಣದಿಂದ ಜಾರಿಗೆ ಬರುವಂತೆ ಮೃಗಾಲಯದ ಸದಸ್ಯತ್ವವನ್ನು ಅಮಾನತುಗೊಳಿಸಲಾಗಿದೆ ಎಂದು WAZA ಅಧ್ಯಕ್ಷ ಕರೆನ್ ಫಿಫೀಲ್ಡ್ ಅವರು ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಶಾಶ್ವತ ಅಮಾನತು ಎಚ್ಚರಿಕೆ
ಅಂತೆಯೇ ಈ ಅಮಾನತನ್ನು ಹಿಂಪಡೆಯಲು, ಆನೆಯನ್ನು ಹೊಸ ಸೌಕರ್ಯದೊಂದಿಗೆ ಬೇರೆಡೆಗೆ ಸ್ಥಳಾಂತರಿಸಲು ಅಥವಾ ಈಗ ಇದ್ದಲ್ಲಿಯೇ ಉತ್ತಮವಾಗಿ ಕಾಳಜಿ ವಹಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಆರು ತಿಂಗಳೊಳಗೆ ಯೋಜನೆಯನ್ನು ರೂಪಿಸಬೇಕು. ಆ ಯೋಜನೆಗೆ ಒಕ್ಕೂಟ ಒಪ್ಪಿಗೆ ನೀಡಬೇಕು. ಒಂದು ವೇಳೆ ಮೃಗಾಲಯದ ಅಧಿಕಾರಿಗಳ ಯೋಜನೆಗೆ ಒಕ್ಕೂಟ ಒಪ್ಪಿಗೆ ನೀಡದೆ ಇದ್ದರೆ ಮೃಗಾಲಯದ ಸದಸ್ಯತ್ವವನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಎಂದೂ ಎಚ್ಚರಿಕೆ ನೀಡಿದೆ.
ಅಂತೆಯೇ CZA ಸದಸ್ಯ ಕಾರ್ಯದರ್ಶಿ ಸಂಜಯ್ ಶುಕ್ಲಾ ಅವರು ಮಾತನಾಡಿ, 'ಹಾಲಿ ದೆಹಲಿ ಮೃಗಾಲಯದಲ್ಲಿರುವ ಆಫ್ರಿಕನ್ ಆನೆ ಶಂಕರಗೆ ಸಂಗಾತಿಯಾಗಿ ಆಫ್ರಿಕನ್ ಹೆಣ್ಣಾನೆಯನ್ನು ನೀಡಲು ಬೋಟ್ಸ್ವಾನಾ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
ಮೃಗಾಲಯವು 60 ದಿನಗಳಲ್ಲಿ WAZA ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಹೊಂದಿದೆ, ಆದರೆ ಮೇಲ್ಮನವಿ ಸಲ್ಲಿಸುವಾಗಲೂ ಮೃಗಾಲಯ ಅಮಾನತಿನಲ್ಲಿಯೇ ಇರಲಿದೆ ಎಂದು ತಿಳಿಸಲಾಗಿದೆ. ಅಂದಹಾಗೆ ಪ್ರಪಂಚದಾದ್ಯಂತ ಪ್ರಾಣಿಗಳು ಮತ್ತು ಅವುಗಳ ಆವಾಸಸ್ಥಾನಗಳ ಬಗ್ಗೆ ನಿಗಾ ಇಡಲು 1935ರಲ್ಲಿ WAZA ಸ್ಥಾಪನೆಯಾಗಿದೆ. ಇದರಲ್ಲಿ 400 ಸಂಘ– ಸಂಸ್ಥೆಗಳು ಸದಸ್ಯತ್ವ ಹೊಂದಿವೆ.
Advertisement