
ಜಮ್ಮು: ಅಖ್ನೂರ್ ಸೆಕ್ಟರ್ನ ಗಡಿ ನಿಯಂತ್ರಣ ರೇಖೆ ಬಳಿಯ ಹಳ್ಳಿಯೊಂದರ ಮೂಲಕ ಹಾದು ಹೋಗುತ್ತಿದ್ದ ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ ಮೂವರು ಭಯೋತ್ಪಾದಕರು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್ನ ಹಳ್ಳಿಯೊಂದರಲ್ಲಿ ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ನೆಲೆಸಿರುವ ಉಗ್ರರ ಗುಂಪಿನ ವಿರುದ್ಧ ದಾಳಿ ನಡೆಸಿದರು. ಈ ವೇಳೆ ಸೇನೆಯ ಗುಂಡಿನ ದಾಳಿಗೆ ಮೂರು ಉಗ್ರರು ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್ಗೆ ಗುಂಡು ಹಾರಿಸಿದ ಮೂವರು ಭಯೋತ್ಪಾದಕರಲ್ಲಿ ಒಬ್ಬಾತ ವಿಶೇಷ ಪಡೆಗಳು ಮತ್ತು ಎನ್ಎಸ್ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಂಜೆಯ ವೇಳೆಗೆ ಹತನಾಗಿದ್ದ. ಇಬ್ಬರು ತಲೆ ಮರೆಸಿಕೊಂಡಿದ್ದರು.
ಶೋಧ ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿದ್ದ ಇಬ್ಬರೂ ಭಯೋತ್ಪಾದಕರು ಬತ್ತಲ್ ಕೌರ್ ಪ್ರದೇಶದ ದೇವಸ್ಥಾನದಲ್ಲಿ ಅಡಗಿರುವುದು ಸೇನೆಗೆ ತಿಳಿದು ಬಂತು. ತಮ್ಮ ಸಹಚರನ ಸಾವಿನ ನಂತರ, ಇಬ್ಬರು ಭಯೋತ್ಪಾದಕರು ದೇವಾಲಯದ ಪಕ್ಕದ ನೆಲಮಾಳಿಗೆಯಲ್ಲಿ ಕಳೆದಿದ್ದರು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಭದ್ರತಾ ಪಡೆಗಳ ಮೇಲೆ ಗ್ರೆನೇಡ್ಗಳನ್ನು ಎಸೆದು ಗುಂಡಿನ ದಾಳಿ ನಡೆಸಲಾಗಿದೆ. ಆಗ ಮತ್ತೊಮ್ಮೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎರಡನೇ ಭಯೋತ್ಪಾದಕನನ್ನು ಕೊಲ್ಲುವ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರವಾದ ಗುಂಡಿನ ದಾಳಿ ಹಾಗೂ ಸ್ಫೋಟಗಳು ಮುಂದುವರೆದವು, ಮೂರನೇ ಉಗ್ರನನ್ನು ಹತ್ಯೆ ಮಾಡುವ ಮೊದಲು ಗಂಟೆ ಗಟ್ಟಲೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಲ್ಕು ವರ್ಷದ ಧೀರ ಸೇನಾ ಶ್ವಾನ ಫ್ಯಾಂಟಮ್ ಕಾರ್ಯಾಚರಣೆ ವೇಳೆ ಗುಂಡು ತಗುಲಿ ಸಾವನ್ನಪ್ಪಿದೆ.
Advertisement