
ನವದೆಹಲಿ: 10 ವರ್ಷಗಳಿಂದ ಪ್ರಜಾಸತ್ತಾತ್ಮಕ ಸಂಸ್ಥೆಗಳ ನಾಶಕ್ಕೆ ಸಂಘಟಿತ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 'ಭಾರತದ ಪ್ರಜಾಪ್ರಭುತ್ವಕ್ಕೆ 2024 ಉತ್ತಮ ವರ್ಷವಾಗಿದೆ. 140 ಕೋಟಿ ಭಾರತೀಯರು ನಮ್ಮ ರಾಷ್ಟ್ರದ ನಿರ್ಮಾತೃಗಳು ಶ್ರಮದಿಂದ ನಿರ್ಮಿಸಿದ ನಮ್ಮ ದೀರ್ಘಕಾಲದ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗಳ ಅನ್ವಯ ತೀರ್ಪು ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವದ ರಚನೆಗಳನ್ನು ನಾಶಮಾಡಲು, ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಉರುಳಿಸಲು ಮತ್ತು ನಮ್ಮ ಸಮಗ್ರತೆಗೆ ಧಕ್ಕೆ ತರಲು ಸಂಘಟಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
‘2024ರ ವರ್ಷ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯುತ್ತಮ ವರ್ಷವಾಗಿದೆ. 140 ಕೋಟಿ ಭಾರತೀಯರು ನಮ್ಮ ರಾಷ್ಟ್ರದ ನಿರ್ಮಾತೃಗಳು ಶ್ರಮದಿಂದ ನಿರ್ಮಿಸಿದ ನಮ್ಮ ದೀರ್ಘಕಾಲದ ಸಂಸ್ಥೆಗಳ ಮೇಲೆ ಇಟ್ಟಿರುವ ನಂಬಿಕೆಗಳ ಅನ್ವಯ ತೀರ್ಪು ನೀಡಿದ್ದಾರೆ’ಎಂದು ಲೋಕಸಭಾ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿ ಖರ್ಗೆ ಹೇಳಿದ್ದಾರೆ.
ಅಂತೆಯೇ ‘ಪ್ರಜಾಪ್ರಭುತ್ವದ ಸರ್ಕಾರವೇ ಅತ್ಯುತ್ತಮ ವಿಧದ ಸರ್ಕಾರವಾಗಿದೆ. ನಮ್ಮನ್ನು ಹೇಗೆ ಆಳಿದರು ಎಂಬುದನ್ನು ವ್ಯಕ್ತಪಡಿಸಲು ಮತ್ತು ನಾಯಕರನ್ನು ಜವಾಬ್ದಾರರನ್ನಾಗಿಸಲು ಜನರಿಗೆ ಇದರಲ್ಲಿ ಅವಕಾಶವಿದೆ’ಎಂಬ ದೇಶದ ಮೊದಲ ಪ್ರಧಾ ಮಂತ್ರಿ ಜವಾಹರಾಲ್ ನೆಹರೂ ಅವರ ಮಾತುಗಳನ್ನು ಖರ್ಗೆ ಉಲ್ಲೇಖಿಸಿದ್ದಾರೆ.
‘ಈಗ ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಾವು ಮತ್ತಷ್ಟು ಜಾಗರೂಕರಾಗಿರಬೇಕು ಹಾಗೂ ಭಾರತದ ಪ್ರಜೆಗಳೆಲ್ಲರೂ ನಂಬಿರುವ ನೀತಿಯನ್ನು ರಕ್ಷಿಸಬೇಕು. ಪ್ರಜಾಪ್ರಭುತ್ವದ ದಿನವಾದ ಇಂದು ಮತ್ತೊಮ್ಮೆ ನಮ್ಮನ್ನು ನಾವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಒಳಗೊಂಡಿರುವ ಭಾರತದ ಮೂಲತತ್ವಕ್ಕೆ ಸಮರ್ಪಿಸಿಕೊಳ್ಳೋಣ’ ಎಂದು ವಿಶ್ವ ಪ್ರಜಾಪ್ರಭುತ್ವದ ದಿನದಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಸೆಪ್ಟೆಂಬರ್ 15 ಅನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಆಚರಿಸಲು ನಿರ್ಧರಿಸಿತ್ತು. ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಕೊಡುಗೆ ನೀಡುವ ಸೂಕ್ತ ರೀತಿಯಲ್ಲಿ ದಿನವನ್ನು ಸ್ಮರಿಸಲು ಎಲ್ಲಾ ಸದಸ್ಯ ರಾಷ್ಟ್ರಗಳು ಮತ್ತು ಸಂಸ್ಥೆಗಳನ್ನು ಆಹ್ವಾನಿಸಿತ್ತು.
Advertisement