ನವದೆಹಲಿ: 10 ವರ್ಷಗಳಲ್ಲಿ ನಮ್ಮ ಸಾಧನೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಕಪ್ಪು ಪತ್ರ ದೃಷ್ಟಿ ಬೊಟ್ಟಿದ್ದಂತೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದರು.
ರಾಜ್ಯಸಭೆಯಲ್ಲಿಂದು ಮಾತನಾಡಿದ ಅವರು, ದುಷ್ಟ ಕಣ್ಣುಗಳಿಂದ ರಕ್ಷಿಸಲು ಮನೆಯಲ್ಲಿ ಮಕ್ಕಳಿಗೆ ಹೇಗೆ ಕಪ್ಪು ಹಚ್ಚುತ್ತೇವೋ ಹಾಗೆಯೇ ಸರ್ಕಾರ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ದುಷ್ಟರ ಕಣ್ಣುಗಳಿಂದ ರಕ್ಷಿಸಲು ಕಾಂಗ್ರೆಸ್ ಹೊರಡಿಸಿರುವ ಕಪ್ಪು ಪತ್ರವೂ ನಮಗೆ ದೃಷ್ಟಿಬೊಟ್ಟಿದ್ದಂತೆ ಎಂದು ವ್ಯಂಗ್ಯವಾಡಿದರು.
ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಂಕಷ್ಟದಂತಹ ಸಮಸ್ಯೆಗಳ ಗುರಿಯಾಗಿಸಿಕೊಂಡು ಮೋದಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಕಾಂಗ್ರೆಸ್ ಇಂದು ಕಪ್ಪು ಪತ್ರವನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2014 ರ ಹಿಂದಿನ ಆರ್ಥಿಕತೆಯ ದುರುಪಯೋಗ ಕುರಿತು ಸಂಸತ್ತಿನಲ್ಲಿ ಶ್ವೇತಪತ್ರವನ್ನು ಮಂಡಿಸುವ ಮೊದಲು ಕಪ್ಪು ಪತ್ರವನ್ನು ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ ಅವರು, ಬೆಲೆ ಏರಿಕೆಯ ಬಗ್ಗೆ ಕೇಳಿದಾಗ ಜವಾಹರಲಾಲ್ ನೆಹರು, ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡುತ್ತಾರೆ ಎಂದಿದ್ದಾರೆ. ಕಾಂಗ್ರೆಸ್ ಭಾರತದ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ ಮತ್ತು 2024 ರಲ್ಲಿ ದೇಶವನ್ನು ಬಿಜೆಪಿಯ ಅನ್ಯಾಯದ ಕತ್ತಲೆಯಿಂದ ಹೊರತರಲಿದೆ ಎಂದು ಹೇಳಿದರು.
Advertisement