ಯೋಗಿ ಆದಿತ್ಯನಾಥ್ ಸರ್ಕಾರ ಅಮಾನವೀಯ, ಅಕ್ರಮ ಕೃತ್ಯ ಎಸಗುತ್ತಿದೆ: ಸುಪ್ರೀಂ ಕೋರ್ಟ್ ಚಾಟಿ
ನವದೆಹಲಿ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹಾಗೂ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರಗಳ ನಡೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ತರಾಟೆಗೆ ತೆಗೆದುಕೊಂಡಿದೆ.
ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರ ಬಲಪ್ರಯೋಗದ ಮೂಲಕ ತೆರವು ಕಾರ್ಯಾಚರಣೆಗಳನ್ನು ಕೈಗೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಮನೆ ಕಟ್ಟಡ ಉರುಳಿಸುವಿಕೆ ಕಾರ್ಯಾಚರಣೆಯ ವಿಷಯವಾಗಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಸರ್ಕಾರದ ನಡೆಯನ್ನು ಅಮಾನವೀಯ, ಅಕ್ರಮ ಎಂದು ಹೇಳಿದೆ.
ಧ್ವಂಸ ಕ್ರಮವನ್ನು "ಉಗ್ರ" ರೀತಿಯಲ್ಲಿ ನಡೆಸಲಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ, "ದೇಶದಲ್ಲಿ ಕಾನೂನಿನ ಆಳ್ವಿಕೆ" ಇದೆ ಮತ್ತು ನಾಗರಿಕರ ವಸತಿ ರಚನೆಗಳನ್ನು ಈ ರೀತಿ ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ.
"ಇದು ನಮ್ಮ ಆತ್ಮಸಾಕ್ಷಿಗೆ ಆಘಾತವನ್ನುಂಟು ಮಾಡುತ್ತದೆ. ಆಶ್ರಯ ಪಡೆಯುವ ಹಕ್ಕು, ಕಾನೂನಿನ ಸೂಕ್ತ ಪ್ರಕ್ರಿಯೆ ಎಂಬುದೊಂದಿದೆ" ಎಂದು ಪೀಠ ಹೇಳಿದೆ.
ಆದ್ದರಿಂದ, ಮನೆ ಮಾಲೀಕರಿಗೆ ತಲಾ ರೂ. 10 ಲಕ್ಷ ಪರಿಹಾರವನ್ನು ಆರು ವಾರಗಳಲ್ಲಿ ಪಾವತಿಸಲು ಸುಪ್ರೀಂ ಕೋರ್ಟ್ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಯಾಗ್ರಾಜ್ನಲ್ಲಿ ನಡೆದ ಧ್ವಂಸ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು ಮತ್ತು ಇದು "ಆಘಾತಕಾರಿ ಮತ್ತು ತಪ್ಪು ಸಂಕೇತ"ವನ್ನು ಕಳುಹಿಸಿದೆ ಎಂದು ಹೇಳಿತ್ತು.
2023 ರಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ಗೆ ಈ ಭೂಮಿ ಸೇರಿದೆ ಎಂದು ಭಾವಿಸಿ ರಾಜ್ಯ ಸರ್ಕಾರವು ಮನೆಗಳನ್ನು ತಪ್ಪಾಗಿ ಕೆಡವಿದೆ ಎಂದು ಅರ್ಜಿದಾರರ ವಕೀಲರು ಹೇಳಿದ್ದರು.
ಸುಪ್ರೀಂ ಕೋರ್ಟ್ ವಕೀಲ ಜುಲ್ಫಿಕರ್ ಹೈದರ್, ಪ್ರಾಧ್ಯಾಪಕ ಅಲಿ ಅಹ್ಮದ್ ಮತ್ತು ಇತರರ ಮನೆಗಳನ್ನು ಕೆಡವಲು ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು.
ಅಲಹಾಬಾದ್ ಹೈಕೋರ್ಟ್ ಧ್ವಂಸವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು. ಪ್ರಯಾಗ್ರಾಜ್ ಜಿಲ್ಲೆಯ ಲುಕರ್ಗಂಜ್ನಲ್ಲಿನ ಕೆಲವು ನಿರ್ಮಾಣಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮಾರ್ಚ್ 6, 2021 ರಂದು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ