
ನವದೆಹಲಿ: ಜೈಲಿನಲ್ಲಿರುವ ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ತಾನು "ಒಬ್ಬ ರಾಜಕೀಯ ನಾಯಕ. ಭಯೋತ್ಪಾದಕನಲ್ಲ", ಈ ಹಿಂದೆ ತನ್ನೊಂದಿಗೆ ಏಳು ಪ್ರಧಾನ ಮಂತ್ರಿಗಳು ಮಾತುಕತೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಮಲಿಕ್, ಸಿಬಿಐ ಅನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದವನ್ನು ಉಲ್ಲೇಖಿಸಿ, ಭಯೋತ್ಪಾದಕ ಹಫೀಜ್ ಸಯೀದ್ ಜೊತೆಗೆ ನನ್ನ ಫೋಟೋಗಳಿವೆ ಮತ್ತು ಅದನ್ನು ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ದಿನಪತ್ರಿಕೆಗಳು ಹಾಗೂ ಟಿವಿ ಚಾನೆಲ್ಗಳು ವರದಿ ಮಾಡಿವೆ ಎಂದರು.
"ಈ ಹೇಳಿಕೆಯು ನನ್ನ ವಿರುದ್ಧ ಸಾರ್ವಜನಿಕವಾಗಿ ಕೆಟ್ಟ ನಿರೂಪಣೆಯನ್ನು ಸೃಷ್ಟಿಸಿದೆ. ಆದರೆ ಕೇಂದ್ರ ಸರ್ಕಾರ ನನ್ನ ಸಂಘಟನೆಯನ್ನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡಿಲ್ಲ ಎಂದು ಮಲಿಕ್ ಹೇಳಿದರು.
1994 ರಲ್ಲಿ ಏಕಪಕ್ಷೀಯ ಕದನ ವಿರಾಮದ ನಂತರ, ನನಗೆ 32 ಪ್ರಕರಣಗಳಲ್ಲಿ ಜಾಮೀನು ನೀಡಲಾಗಿತ್ತು ಮಾತ್ರವಲ್ಲದೆ ಯಾವುದೇ ಪ್ರಕರಣಗಳನ್ನು ಮುಂದುವರಿಸಲಾಗಿಲ್ಲ" ಎಂದು ಮಲಿಕ್ ತಿಳಿಸಿದರು.
"ಪಿ ವಿ ನರಸಿಂಹ ರಾವ್, ಎಚ್ ಡಿ ದೇವೇಗೌಡ, ಐಕೆ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಐದು ವರ್ಷಗಳ ಅವಧಿಯಲ್ಲಿಯೂ ಸಹ ಕದನ ವಿರಾಮ ಪಾಲಿಸಲಾಗಿದೆ. ಈಗ ಇದ್ದಕ್ಕಿದ್ದಂತೆ ಎರಡನೇ ಅವಧಿಯಲ್ಲಿ ಪ್ರಸ್ತುತ ಸರ್ಕಾರವು ನನ್ನ ವಿರುದ್ಧ 35 ವರ್ಷಗಳ ಹಳೆಯ ಭಯೋತ್ಪಾದಕ ಪ್ರಕರಣಗಳ ವಿಚಾರಣೆ ಆರಂಭಿಸಿದೆ. ಇದು ಕದನ ವಿರಾಮ ಒಪ್ಪಂದಕ್ಕೆ ವಿರುದ್ಧವಾಗಿದೆ" ಎಂದು ಹೇಳಿದರು.
Advertisement