
ನವದೆಹಲಿ: ಸಂಸತ್ತಿನ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ಚರ್ಚೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮಿಳುನಾಡು ಸಂಸದರ ಹೇಳಿಕೆ ಕುರಿತು ಕೆಂಡಾಮಂಡಲರಾದ ಘಟನೆ ನಡೆಯಿತು.
ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತ ಚರ್ಚೆ ವೇಳೆ ಉತ್ತರ ಪ್ರದೇಶದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಮಾತನಾಡುತ್ತಿದ್ದರು. ಈ ವೇಳೆ ವಿಪಕ್ಷಗಳ ನಾಯಕರು, 'ಮುಸ್ಲಿಮರನ್ನು ಭಯೋತ್ಪಾದಕರು' ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುಧಾಂಶು ತ್ರಿವೇದಿ ವಿರುದ್ಧ ತಮಿಳುನಾಡಿನ ಸಂಸದರು ಸೇರಿದಂತೆ ಅನೇಕ ವಿರೋಧ ಪಕ್ಷದ ಸಂಸದರು ಧ್ವನಿ ಎತ್ತಿದರು. ಆದಾಗ್ಯೂ, ಸುದಾಂಶು ತ್ರಿವೇದಿ ಮಾತನಾಡುವುದನ್ನು ಮುಂದುವರೆಸಿದರು.
ಈ ವೇಳೆ ತಮಿಳುನಾಡಿನ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಎದ್ದು ನಿಂತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಸತ್ತಿನ ರಾಜ್ಯಸಭೆಯ ಅಧಿವೇಶನದಲ್ಲಿ, ಸಂಸದ ವೈಕೋ ಅವರು ತಮಿಳುನಾಡು ಮೀನುಗಾರರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಭರದಲ್ಲಿ "ನೀವು ತಮಿಳುನಾಡಿಗೆ ಬನ್ನಿ, ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ" ಎಂಬ ವೈಕೋ ಅವರ ಹೇಳಿಕೆ ತೀವ್ರ ಸಂಘರ್ಷಕ್ಕೆ ಕಾರಣವಾಯಿತು.
ವೈಕೋ ಅವರ ಮಾತಿಗೆ ಕಿಡಿಕಾರಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಕ್ಷೇಪ ವ್ಯಕ್ತಪಡಿಸಿ, ಇದು ದೌರ್ಜನ್ಯ ಎಂದು ಬಣ್ಣಿಸಿದರು. 'ಇದು ಸ್ವತಂತ್ರ್ಯ ಭಾರತ.. ಯಾರು ಯಾವ ರಾಜ್ಯಕ್ಕೆ ಬೇಕಾದರೂ ಹೋಗಬಹುದು. ನೀವು ಹಾಗೆ ಮಾತನಾಡಬಾರದಿತ್ತು. ವೈಕೋ ಅವರ ಹೇಳಿಕೆ ಸಂವಿಧಾನ ಬಾಹಿರ.. ಹೀಗಾಗಿ ಅವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೆ ಗಮನಾರ್ಹ ಬದಲಾವಣೆಗಳನ್ನು ತಂದಿದ್ದಕ್ಕಾಗಿ ಪ್ರಸ್ತುತ ಗೃಹ ಸಚಿವರನ್ನು ಸೀತಾರಾಮನ್ ಶ್ಲಾಘಿಸಿದರು.
ಈ ವೇಳೆ ವೈಕೊ ಅದಕ್ಕೆ ಉತ್ತರಿಸಲು ಪ್ರಯತ್ನಿಸಿದರು. ಆದರೆ ನಿರ್ಮಲಾ ಸೀತಾರಾಮನ್, "ಇಲ್ಲ, ಅದು ತಪ್ಪು". ನೀವು ಹಾಗೆ ಹೇಳಬಾರದು. ನೀವು ಹಾಗೆ ಮಾತನಾಡಬಾರದು. ನಾವು ಈ ದೇಶದಲ್ಲಿ ಎಲ್ಲಿ ಬೇಕಾದರೂ ಕಾಲಿಡುತ್ತೇವೆ. ಯಾರಿಗಾದರೂ ಆ ಹಕ್ಕಿದೆ ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಜಗದೀಪ್ ಧಂಕರ್, 'ವೈಕೋ ಅವರ ಭಾಷಣವನ್ನು ಸಭೆಯ ಕಡತಗಳಿಂದ ತೆಗೆದುಹಾಕಲಾಗಿದೆ ಎಂದು ಘೋಷಿಸಿದರು. ಅಲ್ಲದೆ ಒಂದು ರಾಜ್ಯದ ಗೃಹಮಂತ್ರಿಗಳಾಗಿದ್ದವರು ನೀವು. ನಿಮ್ಮಿಂದ ಈ ಮಾತುಗಳು ಬರಬಾರದು. ಸದನದ ಹಿರಿಯ ಸದಸ್ಯರಲ್ಲಿ ನೀವು ಒಬ್ಬರು. ಹೀಗಾಗಿ ಜವಾಬ್ದಾರಿಯುತವಾಗಿ ಮಾತನಾಡಿ ಎಂದರು.
ಆ ಸಮಯದಲ್ಲಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಸಂಸದೆ ಫೌಜಿಯಾ ಖಾನ್ ಕೂಡ ಸುಧಾಂಶು ತ್ರಿವೇದಿ ಅವರ ಭಾಷಣವನ್ನು ವಿರೋಧಿಸಿದರು. "ಯುಪಿ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದು ಒಂದು ಸಮುದಾಯವನ್ನು ದೂಷಿಸಿದಂತೆ. ಹಾಗೆ ಮಾತನಾಡುವುದು ತಪ್ಪು" ಎಂದು ಫೌಜಿಯಾ ಖಾನ್ ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಜಯರಾಮ್ ರಮೇಶ್ ಎದ್ದು ನಿಂತು, "ವೈಕೋ ಅವರ ಭಾಷಣ ತಪ್ಪಾಗಿದ್ದರೆ, ಬಿಜೆಪಿಯ ಯುಪಿ ಸಂಸದರು ಮಾತನಾಡುವುದು ಮತ್ತು ಒಂದು ಸಮುದಾಯವನ್ನು ದೂಷಿಸುವುದು ಸರಿಯೇ?" ಎಂದು ಕೇಳಿದರುಇದರಿಂದ ರಾಜ್ಯಸಭೆಯಲ್ಲಿ ಸ್ವಲ್ಪ ಹೊತ್ತು ಗದ್ದಲ ಉಂಟಾಯಿತು.
Advertisement