
ನವದೆಹಲಿ: 2008ರ ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವ್ವೂರ್ ಹುಸೇನ್ ರಾಣಾನ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಂದು ಮಧ್ಯಾಹ್ನದ ವೇಳೆಗೆ ದೆಹಲಿಗೆ ಆಗಮಿಸುವ ನಿರೀಕ್ಷೆಯಿರುವುದರಿಂದ, ಗೃಹ ಸಚಿವಾಲಯ (MHA) ಈ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಹಿರಿಯ ವಕೀಲ ನರೇಂದರ್ ಮಾನ್ ಅವರನ್ನು ನೇಮಿಸಿದೆ.
ಸರ್ಕಾರದ ಆದೇಶದ ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ವಕೀಲ ನರೇಂದರ್ ಮಾನ್ ಅವರು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಳು ಮತ್ತು ಇತರ ವಿಷಯಗಳನ್ನು ದೆಹಲಿಯ NIA ವಿಶೇಷ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳ ಮುಂದೆ ಅಧಿಸೂಚನೆ ಪ್ರಕಟವಾದ ದಿನದಿಂದ 3 ವರ್ಷಗಳ ಅವಧಿಗೆ ಅಥವಾ ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನಡೆಸುತ್ತಾರೆ ಗೃಹ ಇಲಾಖೆ ತಿಳಿಸಿದೆ.
ಮೂಲಗಳ ಪ್ರಕಾರ, ರಾಣಾನನ್ನು ಲಾಸ್ ಏಂಜಲೀಸ್ನಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ದೆಹಲಿಗೆ ಆಗಮಿಸಿದ ನಂತರ, ಗುಪ್ತಚರ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಮತ್ತು ಅಪರಾಧಶಾಸ್ತ್ರ ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಬಹು-ಏಜೆನ್ಸಿ ತಂಡವು ವಿಚಾರಣೆ ನಡೆಸಲಿದೆ. ಐಎಸ್ಐ ಜಾಲ ಮತ್ತು ಭಾರತದಲ್ಲಿ ಲಷ್ಕರ್-ಎ-ತೈಬಾ ಕಾರ್ಯಾಚರಣೆಗಳೊಂದಿಗೆ ರಾಣಾ ಹೊಂದಿದ್ದ ಸಂಪರ್ಕಗಳ ಮೇಲೆ ವಿಚಾರಣೆ ಕೇಂದ್ರೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ರಾಣಾ ಆಗಮನ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಭದ್ರತಾ ಕಳವಳಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ನಿನ್ನೆ ಪರಿಶೀಲನಾ ಸಭೆ ನಡೆಸಿ ವ್ಯವಸ್ಥೆಗಳ ಕುರಿತು ಚರ್ಚಿಸಿದರು. ರಾಣಾನ ನ್ಯಾಯಾಲಯದ ವಿಚಾರಣೆಗಳನ್ನು ರಹಸ್ಯವಾಗಿ ನಡೆಸಬಹುದು ಎಂದು ಮೂಲಗಳು ತಿಳಿಸಿವೆ.
ಮಾಜಿ ಎನ್ಐಎ ಮುಖ್ಯಸ್ಥ ವೈಸಿ ಮೋದಿ ಪ್ರತಿಕ್ರಿಯಿಸಿ, ರಾಣಾ ಹಸ್ತಾಂತರವು ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಮತ್ತು ಕಾನೂನು ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ. ರಾಣಾ ಪ್ರಕರಣದಲ್ಲಿ ಭಾರತ ಮತ್ತು ಅಮೆರಿಕದ ರಾಜಕೀಯ ಇಚ್ಛಾಶಕ್ತಿ ಇತ್ತು, ಇದು ಪ್ರಕ್ರಿಯೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ತನಿಖಾ ತಂಡದ ಆಪ್ತ ಮೂಲಗಳು ರಾಣಾನ ವಿಚಾರಣೆಯು 26/11 ದಾಳಿಯಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವಿಕೆ, ಐಎಸ್ಐ ಜಾಲದ ರಚನೆ ಮತ್ತು ಕಾರ್ಯಾಚರಣೆಗಳು ಹಾಗೂ ಭಾರತದಲ್ಲಿ ಲಷ್ಕರ್-ಎ-ತೈಬಾದ ಸಹಯೋಗಿಗಳು ಮತ್ತು ಅದರ ಹಣಕಾಸು ಮಾರ್ಗಗಳ ಮೇಲೆ ಕೇಂದ್ರೀಕರಿಸುವ ನಿರೀಕ್ಷೆಯಿದೆ.
Advertisement