
ನವದೆಹಲಿ: ಟಾಯ್ಲೆಟ್ ಕ್ಲೀನರ್'ನಂತಿರುವ ಸಾಫ್ಟ್ ಡ್ರಿಂಕ್ ಹಣ ಮಸೀದಿ-ಮದರಸಾಗೆ ಹೋಗುತ್ತದೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಅವರು ಹೇಳಿದ್ದು, ಈ ಹೇಳಿಕೆ ಭಾರೀ ವೈರಲ್ ಆಗುತ್ತಿದೆ.
ಪತಂಜಲಿ ಶರಬತ್ ಪ್ರಚಾರ ಮಾಡುವ ವಿಡಿಯೋವೊಂದರಲ್ಲಿ ರಾಮ್ ಅವರು "ಶರ್ಬತ್ ಜಿಹಾದ್" ಎಂಬ ಪದವನ್ನು ಬಳಸಿದ್ದು, ಈ ವಿಡಿಯೋವನ್ನು ಪತಾಂಜಲಿ ಪ್ರಾಡಕ್ಟ್ಸ್ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ರಾಮದೇವ್ ಅವರು ತಮ್ಮ ಪತಂಜಲಿ ಗುಲಾಬಿ ಶರಬತ್'ನ್ನು ಪ್ರಚಾರ ಮಾಡುವ ವೇಳೆ, ಇತರ ಶರಬತ್ ಮಾರಾಟ ಕಂಪನಿಗಳು ತಮ್ಮ ಆದಾಯವನ್ನು ಮಸೀದಿ ಮತ್ತು ಮದರಸಾಗಳ ನಿರ್ಮಾಣಕ್ಕೆ ಬಳಸುತ್ತಿವೆ ಎಂದು ಹೇಳಿರುವುದು ಕಂಡು ಬಂದಿದೆ.
ಬೇಸಿಗೆಯ ಬೇಗೆ ತಣಿಸಲು ಜನರು ಸಾಫ್ಟ್ ಡ್ರಿಂಕ್ ಗಳನ್ನು ಸೇವನೆ ಮಾಡುತ್ತಾರೆ. ಆದರೆ, ಈ ಸಾಫ್ಟ್ ಡ್ರಿಂಕ್ ಗಳಲ್ಲಿರುವುದು ಟಾಯ್ಲೆಟ್ ಕ್ಲೀನರ್. ಇದೊಂದು ರೀತಿಯಲ್ಲಿ ವಿಷವಿದ್ದಂತೆ. ಒಂದು ಶರಬತ್ ಕಂಪನಿಯಂತೂ ಇದನ್ನು ಮಾರಿ ಬಂದ ಹಣದಲ್ಲಿ ಮದರಸಾ, ಮಸೀದಿ ನಿರ್ಮಾಣ ಮಾಡುತ್ತಿದೆ. ಶರಬತ್ ಮಾರಾಟ ಕಂಪನಿಯು ಧರ್ಮದ ಹೆಸರಿನಲ್ಲಿ ಹಣವನ್ನು ಬಳಸುತ್ತಿದೆ. ಅದು ಅವರ ಧರ್ಮವಾಗಿರಬಹುದು. ಆದರೆ, ಜನರು ಯಾವ ಶರಬತ್ ಕುಡಿಯುತ್ತಾರೆ ಅದರ ಲಾಭ ಯಾರಿಗೆ ಹೋಗುತ್ತದೆ ಎಂಬುದನ್ನು ತಿಳಿಯಬೇಕು. ಇದೂ ಲವ್ ಜಿಹಾದ್, ವೋಟ್ ಜಿಹಾದ್ ಇದ್ದಂತೆ. ಈಗ ಶರಬತ್ ಜಿಹಾದ್ ಶುರುವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ
ಟಾಯ್ಲೆಟ್ ಕ್ಲೀನರ್ಗಳಂತಿರುವ ತಂಪು ಪಾನೀಯಗಳಿಂದ ವಿಷದ ದಾಳಿ ನಡೆಯುತ್ತಿದೆ. ಶರಬತ್ ಮಾರಾಟ ಮಾಡುವ ಕಂಪನಿಯು ತನ್ನ ಗಳಿಕೆಯನ್ನು ಮಸೀದಿ ಮತ್ತು ಮದರಸಾಗಳ ನಿರ್ಮಾಣಕ್ಕೆ ಬಳಸುತ್ತಿದೆ. ಆದರೆ ಪತಾಂಜಲಿ ಶರಬತ್ ಗಳಿಂದ ದೊರಕುವ ಲಾಭ ಗುರುಕುಲಗಳು, ಪತಾಂಜಲಿ ವಿಶ್ವವಿದ್ಯಾಲಯ ಮತ್ತು ಭಾರತೀಯ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲವಾಗುತ್ತದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.
Advertisement