
ಕಾನ್ಪುರ: ಭಾರತದ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರು 'ಹಿಂದೂಗಳನ್ನು ಒಗ್ಗೂಡಿಸಲು ಅವರ ಜೀವನ ಮುಡಿಪಾಗಿಟ್ಟರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ಶ್ಲಾಘಿಸಿದ್ದಾರೆ.
ಇಂದು ಕಾನ್ಪುರದ ಕರವಾಲೋ ನಗರದಲ್ಲಿ ಹೊಸದಾಗಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಆರ್ಎಸ್ಎಸ್ ಪ್ರಾದೇಶಿಕ ಕಚೇರಿ 'ಕೇಶವ ಭವನ' ಉದ್ಘಾಟಿಸಿ ಮಾತನಾಡಿದ ಭಾಗವತ್, "ಬಾಬಾಸಾಹೇಬ್ ಅವರು ತಮ್ಮ ಜೀವನದಲ್ಲಿ ತೀವ್ರ ಕಷ್ಟಗಳನ್ನು ಎದುರಿಸಿದ್ದಾರೆ. ಬಾಲ್ಯದಿಂದಲೂ ಅವರು ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದರು ಎಂದರು.
"ಆದರೂ, ಅವರ ಜೀವನದುದ್ದಕ್ಕೂ, ಅವರು ಹಿಂದೂ ಸಮಾಜವನ್ನು ಒಟ್ಟುಗೂಡಿಸಲು ಪ್ರಯತ್ನಿಸಿದರು. ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿದ್ದರೂ ಅವರು ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಬದ್ಧರಾಗಿದ್ದರು ಎಂದು ಹೇಳಿದರು.
ಸಾಮಾಜಿಕ ಏಕತೆ ಮತ್ತು ಪ್ರಗತಿಗೆ ಅವರ ಬದ್ಧತೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಮತ್ತು ಅಂಬೇಡ್ಕರ್ ಇಬ್ಬರೂ ಸಮಾಜದ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಕೋನವನ್ನು ಹಂಚಿಕೊಂಡರು ಎಂದು ಹೇಳಿದರು.
"ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹೆಡ್ಗೆವಾರ್ ಇಬ್ಬರೂ ತಮ್ಮ ಜೀವನದುದ್ದಕ್ಕೂ ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದರು. "ಅವರು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು" ಎಂದು ಭಾಗವತ್ ಹೇಳಿದರು.
ಆರ್ಎಸ್ಎಸ್ನ ಹೊಸ ಕಟ್ಟಡದ ಉದ್ಘಾಟನೆಯು ಅಂಬೇಡ್ಕರ್ ಜಯಂತಿಯೊಂದಿಗೆ ನಡೆದಿರುವುದು ಒಂದು ಸೌಭಾಗ್ಯ ಎಂದು ಭಾಗವತ್ ಬಣ್ಣಿಸಿದರು.
"ಇಂದು, ಬಾಬಾಸಾಹೇಬರ ಜನ್ಮ ದಿನ. ಇಂದೇ ನಾವು ಕೇಶವ ಭವನವನ್ನು ಉದ್ಘಾಟಿಸುತ್ತಿರುವುದು ನಮ್ಮ ಅದೃಷ್ಟ. ಡಾ. ಅಂಬೇಡ್ಕರ್ ಒಮ್ಮೆ ಮಹಾರಾಷ್ಟ್ರದ ಕರಾದ್ನಲ್ಲಿ ಸಂಘದ ಶಾಖೆಯಲ್ಲಿ ಭಾಗವಹಿಸಿದ್ದಾಗ, 'ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾನೂ ಇಲ್ಲಿಗೆ ಸೇರಿದವನೆಂಬ ಭಾವನೆ ಇದೆ' ಎಂದು ಹೇಳಿದ್ದರು" ಎಂದು ಭಾಗವತ್ ನೆನಪಿಸಿಕೊಂಡರು.
Advertisement