
ನವದೆಹಲಿ: ಮೋದಿ ಸರ್ಕಾರವು ಬಿ.ಆರ್. ಅಂಬೇಡ್ಕರ್ ಅವರ ಪರಂಪರೆಗೆ ಕೇವಲ "ಲಿಪ್ ಸರ್ವಿಸ್" ನೀಡುತ್ತಿದೆ. ಆದರೆ ಅವರ ಆಶಯಗಳನ್ನು ಈಡೇರಿಸಲು ಏನನ್ನೂ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿ-ಆರ್ಎಸ್ಎಸ್ ಸಂವಿಧಾನ ಶಿಲ್ಪಿಯ "ಶತ್ರುಗಳು" ಎಂದು ಹೇಳಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, 1952 ರ ಚುನಾವಣೆಯಲ್ಲಿ ಎಸ್.ಎ. ಡಾಂಗೆ ಮತ್ತು ವಿ.ಡಿ. ಸಾವರ್ಕರ್, ಸಂವಿಧಾನ ಶಿಲ್ಪಿಯ ಸೋಲಿಗೆ ಕಾರಣ ಎಂದು ಅಂಬೇಡ್ಕರ್ ಬರೆದ ಪತ್ರವನ್ನು ಉಲ್ಲೇಖಿಸಿ ತಿರುಗೇಟು ನೀಡಿದರು.
ಅಂಬೇಡ್ಕರ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ರಾಷ್ಟ್ರವ್ಯಾಪಿ ಜಾತಿ ಜನಗಣತಿಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಂವಿಧಾನವು ನಾಗರಿಕರಿಗೆ ಅಂಬೇಡ್ಕರ್ ನೀಡಿದ ಉಡುಗೊರೆಯಾಗಿದೆ. ಏಕೆಂದರೆ ಅದು ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಹಕ್ಕನ್ನು ನೀಡುತ್ತದೆ ಎಂದು ಅವರು ಹೇಳಿದರು.
"ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಷ್ಟ್ರವ್ಯಾಪಿ ಜಾತಿ ಜನಗಣತಿ ಅಗತ್ಯವನ್ನು ಪ್ರತಿಪಾದಿಸಿದ ಖರ್ಗೆ, "ಕೇಂದ್ರ ಸರ್ಕಾರ 2011 ರ ಜನಗಣತಿಯ ಆಧಾರದ ಮೇಲೆ ನೀತಿಗಳನ್ನು ರೂಪಿಸುತ್ತಿದೆ ಮತ್ತು 2021 ರ ಜನಗಣತಿಯ ಬಗ್ಗೆ ಏನೂ ಮಾಹಿತಿ ಇಲ್ಲ. ಜನಗಣತಿಯ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗುತ್ತದೆ. ಸಾಮಾನ್ಯ ಜನಗಣತಿಯ ಜೊತೆಗೆ, ಯಾವ ವಿಭಾಗವು ಎಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಯಲು ಜಾತಿ ಜನಗಣತಿಯನ್ನು ಸಹ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದರು.
ಜನವರಿ 20, 2006 ರಂದು ಕಾಂಗ್ರೆಸ್ ಪರಿಚಯಿಸಿದ ಆರ್ಟಿಕಲ್ 15(5) ಅಡಿಯಲ್ಲಿ ನೀಡಲಾದ ಮೂಲಭೂತ ಖಾತರಿಯಾದ ಒಬಿಸಿ, ಎಸ್ಸಿ ಮತ್ತು ಎಸ್ಟಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ತಕ್ಷಣ ಮೀಸಲಾತಿ ಜಾರಿಗೆ ತರಬೇಕು ಎಂದು ಅವರು ಹೇಳಿದರು.
ಇನ್ನು ಮೀಸಲಾತಿ ಮೇಲಿನ ಶೇಕಡಾ 50 ರಷ್ಟು ಮಿತಿಯನ್ನು ತೆಗೆದುಹಾಕುವ ಅಗತ್ಯವನ್ನು ಖರ್ಗೆ ಒತ್ತಿ ಹೇಳಿದರು.
Advertisement