
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿರುವುದನ್ನು ಸೇಡಿ ರಾಜಕೀಯ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಲೂಟಿ ಹೊಡೆಯಲು ಯಾರಿಗೂ ಪರವಾನಗಿ ನೀಡುವುದಿಲ್ಲ ಎಂದು ಬುಧವಾರ ಹೇಳಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರದ ಮಾಜಿ ಕಾನೂನು ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ರವಿಶಂಕರ್ ಪ್ರಸಾದ್ ಅವರು, ರಾಜಕೀಯ ಹೇಳಿಕೆಗಳನ್ನು ನೀಡುವ ಬದಲು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಉತ್ತರ ನೀಡಬೇಕೆಂದು ತಿರುಗೇಟು ನೀಡಿದ್ದಾರೆ.
ಯಂಗ್ ಇಂಡಿಯಾ ಕಂಪನಿಯ ಶೇ. 76 ರಷ್ಟು ಷೇರುದಾರರಾಗಿ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹೊಂದಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಒಡೆತನದ ಸಾವಿರಾರು ಕೋಟಿ ರಿಯಲ್ ಎಸ್ಟೇಟ್ ಅನ್ನು "ದುರುಪಯೋಗಪಡಿಸಿಕೊಂಡಿದ್ದಾರೆ" ಎಂಬ ಆರೋಪ ರಾಹುಲ್ ಹಾಗೂ ಸೋನಿಯಾ ಗಾಂಧಿ ವಿರುದ್ಧ ಕೇಳಿ ಬಂದಿದೆ.
ಈ ಪ್ರಕರಣದಿಂದ ಕಾಂಗ್ರೆಸ್ ನಿಜವಾಗಿಯೂ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದೆ. ಅವರು ದೇಶಾದ್ಯಂತ ಪ್ರತಿಭಟನೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿಭಟನೆ ಮಾಡುವ ಹಕ್ಕು ಅವರಿಗಿದೆ, ಆದರೆ, ಭೂಮಿ ಮತ್ತು ಹಣವನ್ನು ಲೂಟಿ ಮಾಡುವ ಹಕ್ಕು ಅವರಿಗಿಲ್ಲ. ಬಿಜೆಪಿ ಪರವಾಗಿ, ಧರಣಿ ನಡೆಸುವ ಎಲ್ಲಾ ಹಕ್ಕು ಕಾಂಗ್ರೆಸ್ಗೆ ಇದ್ದರೂ, ನ್ಯಾಷನಲ್ ಹೆರಾಲ್ಡ್ಗೆ ನೀಡಿದ ಖಾಸಗಿ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವ ಹಕ್ಕನ್ನು ಅವರು ಹೊಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ತನಿಖಾ ಸಂಸ್ಥೆಗೆ ಬೆದರಿಕೆಗಳನ್ನು ನೀಡುತ್ತಿದ್ದಾರೆ. ಕಾನೂನು ಪ್ರಕ್ರಿಯೆ ಮೇಲೆ ಅವರಿಗೆ ನಂಬಿಕೆಯಿಲ್ಲವೇ? ಅವರ ಈ ಬೆದರಿಕಗೆಳನ್ನು ನಾವು ಖಂಡಿಸುತ್ತೇವೆ. ಪ್ರಸ್ತುತ ಮೋದಿ ಸರ್ಕಾರ ಅಧಿಕಾರದಲ್ಲಿದ್ದು, ಕಾನೂನು ಪ್ರಕ್ರಿಯೆ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಜಾಹೀರಾತು ಹಾಗೂ ಆಸ್ತಿ ಮಾಡಲು ನ್ಯಾಷನಲ್ ಹೆರಾಲ್ಡ್ ಅನ್ನು ಕಾಂಗ್ರೆಸ್ ಬಳಸಿಕೊಂಡಿದೆ. "ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವವರ ಧ್ವನಿಯಗಿ ಬಳಕೆಯಾಗುತ್ತಿದ್ದ ಪತ್ರಿಕೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಹಣ ಸಂಪಾದಿಸುವ ದಾರಿಯಾಗಿ, ಅವನತಿ ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹರಿಯಾಣದಲ್ಲಿ ಭೂ ವ್ಯವಹಾರದಲ್ಲಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರು ರಾಜ್ಯದ ಆಗಿನ ಕಾಂಗ್ರೆಸ್ ಸರ್ಕಾರದ ಶಾಮೀಲಿನೊಂದಿಗೆ ಭಾರಿ ಲಾಭ ಗಳಿಸಿದ್ದಾರೆ ಎಂಬ ಆರೋಪ ಕುರಿತು ಮಾತನಾಡಿ, ಇದು "ಗಾಂಧಿ ಅಭಿವೃದ್ಧಿ ಮಾದರಿ" ಎಂದು ಟೀಕಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, 988 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆಂದು ಆರೋಪಿಸಿದೆ. ಇಡಿಯ ಈ ್ರರೋಪಪಟ್ಟಿಯನ್ನು ದ್ವೇಷದ ರಾಜಕೀಯ ಎಂದು ಕಾಂಗ್ರೆಸ್ ಬಣ್ಣಿಸಿದೆ.
Advertisement