
ನವದೆಹಲಿ: ಬೆಂಗಳೂರಿನಲ್ಲಿ ಸಂಜೆಯಾಗುತ್ತಲೇ ಮಳೆ ಬಿದ್ದು ವಾತಾವರಣವನ್ನು ತಂಪು ಮಾಡುತ್ತಿದ್ದರೆ, ಅತ್ತ ಉತ್ತರ ಭಾರತದಲ್ಲಿ ರಣ ಬಿಸಿಲಿಗೆ ಜನ ತತ್ತರಿಸಿ ಹೋಗುತ್ತಿದ್ದಾರೆ.
ಹೌದು.. ಉತ್ತರ ಭಾರತದಲ್ಲಿ ಉಷ್ಣ ಹವೆ ಮುಂದುವರೆದಿದ್ದು, ದೆಹಲಿ, ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶದಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜಸ್ತಾನದ ಬಿಕಾನೇರ್ ನಲ್ಲಿ ಇಂದು ತಾಪಮಾನ ದಾಖಲೆಯ 45.1 ಡಿಗ್ರಿಗೆ ತಲುಪಿದ್ದು, ಇದು ಇಂದು ದೇಶದಲ್ಲಿ ದಾಖಲಾದ ಗರಿಷ್ಛ ತಾಪಮಾನವಾಗಿದೆ.
ಉಳಿದಂತೆ ಗುಜರಾತ್ ನ ಗಾಂಧಿ ನಗರದ ಕಪಡ್ವಂಜ್, ಹಿಮತ್ ನಗರ ಮತ್ತು ರನಸನ್ ಟೌನ್ ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ ತಾಪಮಾನ 42 ಡಿಗ್ರಿಗೇರಿತ್ತು. ಅಂತೆಯೇ ಮಹಾರಾಷ್ಟ್ರದ ಬುಲ್ದಾನದ ಭುಸಾವಲ್ ನಲ್ಲಿ ತಾಪಮಾನ 42 ಡಿಗ್ರಿ ದಾಖಲಾಗಿತ್ತು.
ಬಿರು ಬೇಸಿಗೆಗೆ ರಾಜಸ್ತಾನ ತತ್ತರ
ರಾಜಸ್ತಾನದ ಬಾರ್ಮರ್ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಜೈಸಲ್ಮೇರ್ ಮತ್ತು ಫಲೋಡಿಯಲ್ಲಿ 44.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಚುರು ಮತ್ತು ಚಿತ್ತೋರ್ಗಢದಲ್ಲಿ 44.2 ಡಿಗ್ರಿ ಸೆಲ್ಸಿಯಸ್, ಪಿಲಾನಿ 44.1 ಡಿಗ್ರಿ ಸೆಲ್ಸಿಯಸ್, ಕೋಟಾ 43.3 ಡಿಗ್ರಿ ಸೆಲ್ಸಿಯಸ್, ಬನಸ್ಥಾಲಿ (ಟೋಂಕ್) ಮತ್ತು ಭಿಲ್ವಾರಾ 43.2 ಡಿಗ್ರಿ ಸೆಲ್ಸಿಯಸ್ ಮತ್ತು ಗಂಗಾನಗರ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇತರ ಸ್ಥಳಗಳಲ್ಲಿ ಗರಿಷ್ಠ ತಾಪಮಾನವು 35.5 ಡಿಗ್ರಿ ಸೆಲ್ಸಿಯಸ್ (ಪಾಲಿ) ನಿಂದ 42.8 ಡಿಗ್ರಿ ಸೆಲ್ಸಿಯಸ್ (ಜೋಧ್ಪುರ) ವರೆಗೆ ಇತ್ತು.
ಹವಾಮಾನದಲ್ಲಿ ಸದ್ಯಕ್ಕೆ ಬದಲಾವಣೆ ಇಲ್ಲ
ಇನ್ನು ಮುಂದಿನ 24 ಗಂಟೆಗಳಲ್ಲಿ ಹವಾಮಾನ ಪರಿಸ್ಥಿತಿಗಳು ಬದಲಾಗದೆ ಉಳಿಯುವ ನಿರೀಕ್ಷೆಯಿದ್ದು, ಇದೇ ರೀತಿಯ ತಾಪಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದಾಗ್ಯೂ, 2 ದಿನಗಳ ನಂತರ ತಾಪಮಾನವು 2 ರಿಂದ 4 ಡಿಗ್ರಿಗಳಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 20 ರಿಂದ ಶಾಖದ ಅಲೆಯಿಂದ ಪರಿಹಾರ ದೊರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಏಪ್ರಿಲ್ 18 ಮತ್ತು 19 ರಂದು ಜೋಧ್ಪುರ ಮತ್ತು ಬಿಕಾನೇರ್ ವಿಭಾಗಗಳ ಕೆಲವು ಭಾಗಗಳಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಬಲವಾದ ಗಾಳಿ ಮತ್ತು ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಿದೆ.
Advertisement