
ನವದೆಹಲಿ: ಮಸೂದೆಗಳ ಕುರಿತು ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್, "ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ" ಎಂದು ಗುರುವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ, ಸುಪ್ರೀಂ ಕೋರ್ಟ್ ಮೊದಲ ಬಾರಿಗೆ, ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಮಸೂದೆಗಳನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಅವುಗಳಿಗೆ ಅಂಕಿತ ಹಾಕಬೇಕು ಎಂದು ಗಡುವು ವಿಧಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು.
ಇಂದು ರಾಜ್ಯಸಭೆಯ ಇಂಟರ್ನ್ಗಳನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಧನಕರ್, "ಇತ್ತೀಚಿನ ತೀರ್ಪಿನಿಂದ ರಾಷ್ಟ್ರಪತಿಗಳಿಗೆ ನಿರ್ದೇಶನವಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನು ನಡೆಯುತ್ತಿದೆ? ನಾವು ಅತ್ಯಂತ ಸೂಕ್ಷ್ಮವಾಗಿರಬೇಕು. ಯಾರಾದರೂ ಟೀಕಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯಲ್ಲ. ರಾಷ್ಟ್ರಪತಿಗಳಿಗೆ ಗಡುವು ನೀಡಲಾಗಿದೆ ಮತ್ತು ಆ ಗಡುವು ಮೀರಿದರೆ ಅದು ಕಾನೂನಾಗುತ್ತದೆ" ಎಂದು ಧನಕರ್ ಹೇಳಿದರು.
"ಆದ್ದರಿಂದ ನಮ್ಮಲ್ಲಿ ಶಾಸನ ರಚಿಸುವ, ಕಾರ್ಯಕಾರಿ ಕಾರ್ಯಗಳನ್ನು ನಿರ್ವಹಿಸುವ, ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಇದ್ದಾರೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆ ಇಲ್ಲ. ಏಕೆಂದರೆ ಈ ನೆಲದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಭಾರತದ ರಾಷ್ಟ್ರಪತಿಗಳು ಬಹಳ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಪ್ರೇಕ್ಷಕರಿಗೆ ನೆನಪಿಸಿದ ಧನಕರ್, ರಾಷ್ಟ್ರಪತಿಗಳು ಸಂವಿಧಾನವನ್ನು ಸಂರಕ್ಷಿಸುವುದಾಗಿ, ರಕ್ಷಿಸುವುದಾಗಿ ಮತ್ತು ಸಮರ್ಥಿಸಿಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಉಪ ರಾಷ್ಟ್ರಪತಿಗಳು ಸೇರಿದಂತೆ ಸಚಿವರು, ಸಂಸದರು ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಪಾಲಿಸುವುದಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದರು.
"ನೀವು ಭಾರತದ ರಾಷ್ಟ್ರಪತಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ನಾವು ನೋಡಲು ಸಾಧ್ಯವಿಲ್ಲ ಮತ್ತು ಯಾವ ಆಧಾರದ ಮೇಲೆ? ಸಂವಿಧಾನದ ಅಡಿಯಲ್ಲಿ ನೀವು ಹೊಂದಿರುವ ಏಕೈಕ ಹಕ್ಕು 142ನೇ ವಿಧಿಯಡಿ ನೀಡಲಾಗಿರುವ ವಿಶೇಷಾಧಿಕಾರ, ಅಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರಬೇಕು ... "ಎಂದು ಅವರು ಹೇಳಿದರು.
Advertisement