"ಆತ ಸಾಯಬೇಕು": ಅತ್ಯಾಚಾರದ ಆರೋಪಿಯನ್ನು ಬೆತ್ತಲುಗೊಳಿಸಿ ಥಳಿತ, ನಾಯಿಗಳಿಂದ ದಾಳಿ!
ಲಖನೌ: ಉತ್ತರ ಪ್ರದೇಶದ ವಿಶೇಶ್ವರಗಂಜ್ ಪ್ರದೇಶದಲ್ಲಿ ಅತ್ಯಾಚಾರ ಆರೋಪದ ಮೇಲೆ ವ್ಯಕ್ತಿಯನ್ನು ಎತ್ತಿನ ಬಂಡಿಗೆ ಕಟ್ಟಿ, ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ನಂತರ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
22 ವರ್ಷದ ಯುವಕನ ದೇಹವನ್ನು ಬೆತ್ತಲೆಗೊಳಿಸಿ ಎತ್ತಿನ ಬಂಡಿಗೆ ಕಟ್ಟಿ ಹಾಕಿರುವುದನ್ನು ವೀಡಿಯೊ ತೋರಿಸುತ್ತದೆ. ಕೆಲವರು ನಾಯಿಯನ್ನು ಅವನ ಮೇಲೆ ದಾಳಿ ಮಾಡಲು ಪ್ರೇರೇಪಿಸುತ್ತಿರುವುದನ್ನು ಮತ್ತು ಇತರರು ಥಳಿಸಬೇಕೆಂದು ಪ್ರೋತ್ಸಾಹಿಸುತ್ತಿರುವುದು ಕೇಳಿಬರುತ್ತಿದೆ. ಆತ ಸಾಯಬೇಕು ಎಂಬ ಆಗ್ರಹ ಗುಂಪಿನಿಂದ ಕೇಳಿಬರುತ್ತಿದೆ.
ಗುರುವಾರ ವಿಡಿಯೋ ವ್ಯಾಪಕವಾಗಿ ಪ್ರಸಾರವಾದ ನಂತರ, ವ್ಯಕ್ತಿಯ ಕುಟುಂಬ ಸ್ಥಳೀಯ ಪೊಲೀಸರಿಗೆ ದೂರು ನೀಡಿದೆ.
"ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ ಅಡಿಯಲ್ಲಿ ಹಲ್ಲೆ ಮತ್ತು ಹಾನಿಗಾಗಿ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ಶುಕ್ರವಾರ ತಿಳಿಸಿದ್ದಾರೆ.
ಏಪ್ರಿಲ್ 3 ರಂದು ಹಳ್ಳಿಯ ಬಳಿ ತನ್ನ ಭಾವನನ್ನು ಹಗ್ಗಗಳಿಂದ ಕಟ್ಟಿ ಥಳಿಸಲಾಯಿತು ಎಂದು ದೂರುದಾರರು ಆರೋಪಿಸಿರುವುದಾಗಿ ಪಾಂಡೆ ಹೇಳಿದ್ದಾರೆ.
"ಕುಟುಂಬದವರು ಆತನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
"ಘಟನೆಯಲ್ಲಿ ಎರಡು ವಿಭಿನ್ನ ಸಮುದಾಯಗಳ ವ್ಯಕ್ತಿಗಳು ಭಾಗಿಯಾಗಿದ್ದರೂ, ಕೋಮು ಉದ್ವಿಗ್ನತೆಗೆ ಯಾವುದೇ ಪುರಾವೆಗಳಿಲ್ಲ. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ" ಎಂದು ವಿಶೇಶ್ವರಗಂಜ್ SHO ಗ್ಯಾನ್ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ