
ಮಂಗಳೂರು: ಮಂಗಳೂರು ಬಳಿ ಪಶ್ಚಿಮ ಬಂಗಾಳದ ಕೂಚ್ ಬಿಹಾರ ಮೂಲದ 20 ವರ್ಷದ ಯುವತಿ ಮೇಲೆ ಆಟೋ ರಿಕ್ಷಾ ಚಾಲಕ ಮತ್ತು ಇತರ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೇರಳದ ಪ್ಲೈವುಡ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವತಿ ಬುಧವಾರ ರಾತ್ರಿ ಪರಿಚಿತ ಪುರುಷನೊಂದಿಗೆ ರೈಲಿನಲ್ಲಿ ಮಂಗಳೂರಿಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಉದ್ಯೋಗ ಹುಡುಕಿಕೊಂಡು ನಗರಕ್ಕೆ ಮಹಿಳೆ ಬಂದಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಯುವತಿ ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಒಬ್ಬಳೇ ಮಧ್ಯರಾತ್ರಿ ಹೊರಗೆ ಬಂದಿದ್ದಾಳೆ. ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ತನ್ನ ಆಟೋದಲ್ಲಿ ಕರೆದುಕೊಂಡು ಹೋದ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಆಟೋ ಚಾಲಕ ತನಗೆ ಮಾದಕ ವಸ್ತು ನೀಡಿದ ನಂತರ ತಾನು ಪ್ರಜ್ಞೆ ತಪ್ಪಿದೆ ಎಂದು ಯುವತಿ ಆರೋಪಿಸಿದ್ದಾರೆ. ತನಗೆ ಭಾಗಶಃ ಪ್ರಜ್ಞೆ ಬಂದಾಗ, ಆಟೋ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳೊಂದಿಗೆ ಕಾರಿನಲ್ಲಿದ್ದೆ ಎಂದು ಯುವತಿ ಹೇಳಿದ್ದಾರೆ.
ಅತ್ಯಾಚಾರ ಎಸಗಿದ ಬಳಿಕ ಆಟೋ ಚಾಲಕ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದು, ಆಕೆ ಹತ್ತಿರದ ಮನೆಯೊಂದಕ್ಕೆ ಹೋಗಿ ನೀರು ಕೇಳಿದ್ದಾಳೆ. ಈ ವೇಳೆ ಮನೆಮಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆ ಪಡೆದು ಪ್ರಜ್ಞೆ ಮರಳಿದ ನಂತರ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ/ಅತ್ಯಾಚಾರ ನಡೆದಿರಬಹುದು ಎಂದು ಯುವತಿ ಹೇಳಿದ್ದಾಳೆ.
ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 126(2), 140(2), 352, 351 (1), 1 1 5(2), 64, 309(6), 70, ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತನಿಖೆಯ ಭಾಗವಾಗಿ, ಮೂವರು ಶಂಕಿತರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಮೂಲ್ಕಿಯ ಕಾರ್ನಾಡ್ನ ಆಟೋ ಚಾಲಕ ಪ್ರಭುರಾಜ್(38), ಕುಂಪಳದ ಚಿತ್ರಾಂಜಲಿ ನಗರದ ಮಿಥುನ್(37), ಮತ್ತು ಪಡೀಲ್ನ ಕೊಡಕ್ಕಲ್ನ ಶಿವಾಜಿನಗರ ಹೌಸ್ನ ಮನೀಶ್ (30) ಎಂದು ಗುರುತಿಸಲಾಗಿದೆ.
Advertisement