
ಶ್ರೀನಗರ: ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ನಂತರ, ಕಾಶ್ಮೀರ ಕಣಿವೆಯ ಪ್ರವಾಸಿ ತಾಣವಾಗಿರುವ ಪರ್ವತಗಳಲ್ಲಿ ಸೇನೆ ಮತ್ತು ಅರೆಸೈನಾ ಪಡೆಗಳನ್ನು ಶಾಶ್ವತವಾಗಿ ನಿಯೋಜಿಸಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.
ಜುಲೈ 3 ರಿಂದ ಪ್ರಾರಂಭವಾಗುವ ವಾರ್ಷಿಕ ಅಮರನಾಥ ಯಾತ್ರೆಗೆ ಮುಂಚಿತವಾಗಿ ಭದ್ರತಾ ಪಡೆಗಳ ಮರು ನಿಯೋಜನೆ ಅಗತ್ಯವಾಗಿದೆ ಎಂದು ಭದ್ರತಾ ಸಂಸ್ಥೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ನಿನ್ನೆ ಉಗ್ರರು ದಾಳಿ ನಡೆಸಿದ ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಬಿಸಾರನ್ ಕಣಿವೆಯ ಹುಲ್ಲುಗಾವಲು ಸಮೀಪದಲ್ಲಿ ಯಾವುದೇ ಭದ್ರತಾ ಪಡೆಗಳು ಇರಲಿಲ್ಲ. ಸೇನೆಯ ರಾಷ್ಟ್ರೀಯ ರೈಫಲ್ಸ್(RR)ನ 3ನೇ ಬೆಟಾಲಿಯನ್ನ ಘಟಕ ಮತ್ತು CRPFನ 116ನೇ ಬೆಟಾಲಿಯನ್ನ ಒಂದು ತುಕಡಿ ಹತ್ತಿರದಲ್ಲಿರುತ್ತದೆ ಎಂದು ಮೂಲಗಳು ತಿಳಿಸಿವೆ.
10-11 ಕಿ.ಮೀ ದೂರದಲ್ಲಿರುವ ಬೈಸರನ್ ಹುಲ್ಲುಗಾವಲನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೇಲೆ ಮಾತ್ರ ತಲುಪಬಹುದಾಗಿದೆ. ಹೀಗಾಗಿ ಸೇನೆ ಬಿಸಾರನ್ ಪ್ರದೇಶದ ಈ ಸ್ಥಳವನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಭದ್ರತಾ ಪಡೆಗಳು ಸಾಮಾನ್ಯವಾಗಿ ಶಿಖರಗಳಲ್ಲಿ ಗಸ್ತು ತಿರುಗುತ್ತವೆ ಮತ್ತು ಕಾಶ್ಮೀರ ಕಣಿವೆಯಲ್ಲಿ ಚೆಕ್ ಪೋಸ್ಟ್ಗಳನ್ನು ನಿಯೋಜಿಸುವ ಮೂಲಕ ಹುಲ್ಲುಗಾವಲುಗಳಿಗೆ ಪ್ರವೇಶವನ್ನು ನಿಯಂತ್ರಿಸುತ್ತವೆ.
ಭದ್ರತಾ ಸಂಸ್ಥೆಗಳು, ಈಗ ಬಿಸಾರನ್ ಕಣಿವೆ ಪ್ರದೇಶಕ್ಕೆ ಹತ್ತಿರದಲ್ಲಿ ನೆಲೆಗೊಳ್ಳಲು ಮತ್ತು ಯಾವುದೇ ಭಯೋತ್ಪಾದಕ ಚಲನವಲನಗಳನ್ನು ನಿಯಂತ್ರಣದಲ್ಲಿಡಲು ಅರಣ್ಯದ ಹಿಂಭಾಗವನ್ನು ಸುರಕ್ಷಿತಗೊಳಿಸಲು ಸೈನಿಕರ ನಿಯೋಜನೆಯನ್ನು ಮರುಹೊಂದಿಸಲು ಯೋಜಿಸುತ್ತಿವೆ.
ಭಯೋತ್ಪಾದಕ ದಾಳಿಯ ನಂತರ ದೆಹಲಿ ಮತ್ತು ಶ್ರೀನಗರದಲ್ಲಿ ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಸಭೆಗಳ ನಂತರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
Advertisement