
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬುಧವಾರ ತೀವ್ರವಾಗಿ ಖಂಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಉನ್ನತ ನಾಯಕರೊಬ್ಬರು, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ನಾಗ್ಪುರ ಪ್ರಧಾನ ಕಚೇರಿಯನ್ನು ಹೊಂದಿರುವ ಹಿಂದುತ್ವ ಸಂಘಟನೆಯ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್, ಮಾರಕ ದಾಳಿಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.
ಮಂಗಳವಾರ (ಏ.22) ರಂದು ಮಧ್ಯಾಹ್ನ ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿರುವ ಪ್ರಮುಖ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಕನಿಷ್ಠ 26 ಜನರನ್ನು ಕೊಂದಿದ್ದಾರೆ.
"ಇದು ಅತ್ಯಂತ ಖಂಡನೀಯ ಘಟನೆ. ದಾಳಿಗೆ ಮುನ್ನ ಧರ್ಮದ ಆಧಾರದ ಮೇಲೆ ಬಲಿಪಶುಗಳನ್ನು ಗುರುತಿಸಿರುವುದು ವಿಶೇಷವಾಗಿ ತೊಂದರೆದಾಯಕ ಮತ್ತು ತೀವ್ರ ಕಳವಳಕಾರಿ" ಎಂದು ಅಂಬೇಕರ್ ಪ್ರತಿಪಾದಿಸಿದ್ದಾರೆ.
"ಇದು ರಾಷ್ಟ್ರೀಯ ಮಹತ್ವದ ವಿಷಯವಾಗಿರುವುದರಿಂದ ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕು. ಅಂತಹ ಸಮಯದಲ್ಲಿ ರಾಷ್ಟ್ರವು ಒಟ್ಟಾಗಿ ನಿಲ್ಲಬೇಕು" ಎಂದು ಅವರು ಕರೆ ನೀಡಿದ್ದಾರೆ.
ಅಂಬೇಕರ್ ಈ ಹೇಯ ಕೃತ್ಯಕ್ಕೆ ಬಲವಾದ ಪ್ರತಿಕ್ರಿಯೆ ನೀಡಬೇಕು ಮತ್ತು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. "ಈ ಘಟನೆಗೆ ಕಾರಣರಾದವರು ಅತ್ಯಂತ ಕಠಿಣ ಶಿಕ್ಷೆಯನ್ನು ಎದುರಿಸಬೇಕು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಈ ದಿಕ್ಕಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನಾನು ನಂಬುತ್ತೇನೆ" ಎಂದು ಆರ್ಎಸ್ಎಸ್ನ ಹಿರಿಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ದಾಳಿಯಿಂದ ಹಾನಿಗೊಳಗಾದವರಿಗೆ ಅಗತ್ಯವಿರುವ ಎಲ್ಲಾ ನೆರವು ದೊರೆತಿದೆಯೇ ಎಂಬುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು" ಎಂದು ಅಂಬೇಕರ್ ಇದೇ ವೇಳೆ ಹೇಳಿದ್ದಾರೆ.
Advertisement