
ಕಾನ್ಪುರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಬಲಿಯಾದವರಿಗೆ ದೇಶ ವಿದಾಯ ಹೇಳುತ್ತಿರುವಂತೆಯೇ, ತನ್ನವರನ್ನು ಕಳೆದುಕೊಂಡ ಸಂತ್ರಸ್ತರು ಉಗ್ರರ ಭೀಕರ ಕರಾಳತೆ ಬಿಚ್ಚಿಟ್ಟಿದ್ದಾರೆ.
ಏಪ್ರಿಲ್ 22 ರಂದು ಬೈಸರನ್ ಕಣಿವೆಯ ಹುಲ್ಲುಗಾವಲಿನಲ್ಲಿ ಉಗ್ರರು ಮೊದಲು ಗುಂಡಿಕ್ಕಿ ಕೊಂದ ಉತ್ತರ ಪ್ರದೇಶದ ಶುಭಂ ದ್ವಿವೇದಿ ಪತ್ನಿ ಈಶಾನಾಯ್ ಉಗ್ರರ ಕೌರ್ಯವನ್ನು ವಿವರಿಸಿದರು. ನಾವು ಊಟಕ್ಕೆ ಕುಳಿತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಧರ್ಮದ ಬಗ್ಗೆ ಕೇಳಿದರು ಎಂದು ತಿಳಿಸಿದರು.
ಮ್ಯಾಗಿಗೆ ಆರ್ಡರ್ ಮಾಡಿ, ನಾನು ಮತ್ತು ಶುಭಂ ಕುಳಿತ್ತಿದ್ದೇವು. ತಂದೆ ಬಾತ್ರೂಮ್ ನಲ್ಲಿದ್ದರು. ಆ ಸಮಯದಲ್ಲಿ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ, ನೀವು ಹಿಂದೂ ಅಥವಾ ಮುಸ್ಲಿಮ್? ಅಂತಾ ಕೇಳಿದ. ತದನಂತರ ನೀವು ಮುಸ್ಲಿಮರಾಗಿದ್ದರೆ, ಮೊದಲು ಕಲ್ಮಾ ಓದಿದ್ದೀರಿ ಎಂದು ಹೇಳಿದ. ನಮಗೆ ಅದು ಗೊತ್ತಿರಲಿಲ್ಲ. ನನ್ನ ಪತಿ ಹಿಂದೂ ಅಥವಾ ಮುಸ್ಲಿಂ ವ್ಯಕ್ತಿಯಾ ಅಂತಾ ಕೇಳಿದ್ರು, ನಾನು ಹಿಂದೂ ಅಂತಾ ಹೇಳಿದಾಗ, ನನ್ನ ಪತಿಯನ್ನು ಮೊದಲಿಗೆ ಗುಂಡಿಕ್ಕಿ ಕೊಂದು ಹಾಕಿದರು ಎಂದು ಈಶಾನಾಯ್ ತಿಳಿಸಿದರು.
ತನ್ನನ್ನು ಕೊಲ್ಲುವಂತೆ ಉಗ್ರರಿಗೆ ಈಶಾನಾಯ್ ಕೇಳಿಕೊಂಡಾಗ, ಪ್ರಧಾನಿ ಮೋದಿ ಈ ವಿಷಯ ತಿಳಿಸಲು ಆಕೆಯನ್ನು ಕೊಲ್ಲದೆ ಜೀವ ಉಳಿಸಿರುವುದಾಗಿ ಉಗ್ರರು ಹೇಳಿದ್ದಾರೆ ಎಂದು ಶುಭಂ ದ್ವಿವೇದಿ ಅವರ ತಂದೆ ಸಂಜಯ್ ದ್ವಿವೇದಿ ಹೇಳಿದರು.
ಶ್ರೀನಗರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು, ನಮಗೆ ಏನು ಬೇಕು ಎಂದು ಹೇಳಿದ್ದೇವೆ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಏಳು ಪೀಳಿಗೆಯ ಜನರು ಮತ್ತೆ ಯಾರನ್ನೂ ಕೊಲ್ಲಲು ಹೆದರುವಂತಹ ಶಿಕ್ಷೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
Advertisement