
ಶ್ರೀನಗರ: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ವಿರುದ್ಧ ದೇಶದಾದ್ಯಂತ ಶೋಕ ಮತ್ತು ಖಂಡನೆ ವ್ಯಕ್ತವಾಗುತ್ತಿರುವ ನಡುವೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರಿಗಳು ನಿಮ್ಮ ಶತ್ರುಗಳು ಎಂಬ ಭಾವನೆಗೆ ಒಳಗಾಗಬೇಡಿ ಎಂದು ಗುರುವಾರ ದೇಶದ ಜನರಿಗೆ ಮನವಿ ಮಾಡಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಅವರು, ದಾಳಿಯಲ್ಲಿನ ಸಂತ್ರಸ್ತರೊಂದಿಗೆ ನಾವಿದ್ದೇವೆ ಮತ್ತು ಈ ಘಟನೆಗೆ ಕಾಶ್ಮೀರಿಗಳನ್ನು ದೂಷಿಸುವುದನ್ನು ನಿಲ್ಲಿಸುವಂತೆ ದೇಶದ ಜನರಿಗೆ ಮನವಿ ಮಾಡಿದರು.
ದಾಳಿಯನ್ನು ಖಂಡಿಸಿ ವಿರೋಧ ವ್ಯಕ್ತಪಡಿಸಿದ ಕಾಶ್ಮೀರಿ ಜನರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಇದು ಸ್ಥಳೀಯ ಜನರಿಂದ ಆಗಿದ್ದಲ್ಲ, ಬಾಹ್ಯ ಅಂಶಗಳಿಂದ ನಡೆಸಲ್ಪಟ್ಟ ದಾಳಿಯಾಗಿದೆ ಎಂದು ಹೇಳಿದರು.
'ಇಂತಹ ದುರಂತ ಘಟನೆಯನ್ನು ಎದುರಿಸಬೇಕಾದ ಸಂತ್ರಸ್ತ ಕುಟುಂಬಗಳಿಗೆ ನಾನು ಒಗ್ಗಟ್ಟನ್ನು ತೋರಿಸಲು ಬಯಸುತ್ತೇನೆ... ಇಲ್ಲಿಗೆ ತಮ್ಮ ರಜೆಯನ್ನು ಆನಂದಿಸಲು ಬಂದ ನಮ್ಮ 25 ಅತಿಥಿಗಳು ಅಥವಾ ಅಲ್ಲಿನ ಜನರನ್ನು ರಕ್ಷಿಸಲು ತನ್ನ ಪ್ರಾಣ ತ್ಯಾಗ ಮಾಡಿದ ನಮ್ಮ ಕಣಿವೆಯ ಒಬ್ಬ ವ್ಯಕ್ತಿಯ ಕುಟುಂಬಗಳಗಿ ಸಂತಾಪ ಸೂಚಿಸುತ್ತೇವೆ. ದಾಳಿಯನ್ನು ಖಂಡಿಸಿದ ಕಾಶ್ಮೀರದ ಜನರಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಅಬ್ದುಲ್ಲಾ ಹೇಳಿದರು.
'ದಾಳಿಯ ನಂತರ ಕಾಶ್ಮೀರದ ಜನರು ಇದೇ ಮಾತನ್ನು ಹೇಳಿದ್ದಾರೆ. ಈ ಕೃತ್ಯದಲ್ಲಿ ಕಾಶ್ಮೀರಿಗಳು ಭಾಗಿಯಾಗಿಲ್ಲ ಮತ್ತು ದಾಳಿ ಕೂಡ ಅವರಿಗಾಗಿ ನಡೆದಿಲ್ಲ. ನಾನು ದೇಶದ ಜನರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಕಾಶ್ಮೀರಿಗಳನ್ನು ನಿಮ್ಮ ಶತ್ರುಗಳೆಂದು ಭಾವಿಸಬೇಡಿ; ನಾವು ಅದರಲ್ಲಿ ತಪ್ಪಿತಸ್ಥರಲ್ಲ... ಕಳೆದ 35 ವರ್ಷಗಳಿಂದ ನಾವು ಸಹ ಬಳಲುತ್ತಿದ್ದೇವೆ... ದಯವಿಟ್ಟು ಅಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಿರಿ... ಅದನ್ನು ನಿಲ್ಲಿಸುವಂತೆ ನಾವು ವಿನಂತಿಸುತ್ತೇವೆ' ಎಂದರು.
ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿಯನ್ನು ಬಯಸುತ್ತಾರೆ ಮತ್ತು ಅಂತಹ ಹಿಂಸಾಚಾರಗಳು ಅವರ ಇಚ್ಛೆಯನ್ನು ಪ್ರತಿನಿಧಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿಯನ್ನು ವಿರೋಧಿಸುವುದಿಲ್ಲ; ಅವರು ಶಾಂತಿಯನ್ನು ಬಯಸುತ್ತಾರೆ... ಈಗ ನಡೆದಿರುವುದು ನಮ್ಮ ಇಚ್ಛೆಯಂತೆ ನಡೆದಿಲ್ಲ. ನಮ್ಮ ಇಚ್ಛೆ ಆಗಿದ್ದರೆ, ಅದು ಆಗುತ್ತಲೇ ಇರಲಿಲ್ಲ... ಇದು ದುರದೃಷ್ಟಕರ' ಎಂದು ಅಬ್ದುಲ್ಲಾ ಹೇಳಿದರು.
ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ವಿದೇಶಿಗಳು ಸೇರಿ 26 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಮಂಗಳವಾರ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ನಡೆಸಿದ ಈ ದಾಳಿಯು, 2019ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿದೆ.
Advertisement