
ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ವಾಸಿಸುತ್ತಿರುವ 111 ಪಾಕಿಸ್ತಾನಿ ಪ್ರಜೆಗಳಿಗೆ ಏ. 27 ರೊಳಗೆ ಭಾರತವನ್ನು ತೊರೆಯುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕ್ ನಾಗರಿಕರಿಗೆ ನೀಡಲಾದ ಎಲ್ಲಾ ರೀತಿಯ ವೀಸಾಗಳನ್ನು ಅಮಾನತುಗೊಳಿಸಿದ ನಂತರ ಈ ಕ್ರಮ ಕೈಗೊಂಡಿದೆ.
ಆದರೆ ವೈದ್ಯಕೀಯ ವೀಸಾಗಳು ಹೆಚ್ಚುವರಿಯಾಗಿ ಎರಡು ದಿನಗಳವರೆಗೆ ಮಾನ್ಯವಾಗಿರುತ್ತವೆ. ವೀಸಾ ನೀಡುವ ಕೇಂದ್ರಗಳು ಮತ್ತು ಪಾಸ್ಪೋರ್ಟ್ ಕಚೇರಿಯಿಂದ ಪಾಕಿಸ್ತಾನಿ ಪ್ರಜೆಗಳ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಸುದ್ದಿಗಾರರಿಗೆ ತಿಳಿಸಿದರು.
"ಇದುವರೆಗೆ 111 ಪಾಕಿಸ್ತಾನಿ ಪ್ರಜೆಗಳ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಅವರೆಲ್ಲರೂ ನಿಗದಿತ ಗಡುವಿನೊಳಗೆ ದೇಶ ತೊರೆಯುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಪ್ರವಾಸೋದ್ಯಮ, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ವೀಸಾಗಳನ್ನು ನೀಡಲಾಗಿದ್ದು, ‘ವೈದ್ಯಕೀಯ ಕಾರಣಕ್ಕಾಗಿ ಇಲ್ಲಿರುವವರು ಏಪ್ರಿಲ್ 29 ರೊಳಗೆ ಹೊರಡಲು ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಮಧ್ಯೆ ಛತ್ರಪತಿ ಸಂಭಾಜಿನಗರದ ಪೊಲೀಸರು 57 ಪಾಕಿಸ್ತಾನಿ ಪ್ರಜೆಗಳು ದೀರ್ಘಾವಧಿಯ ವೀಸಾದಲ್ಲಿ ನಗರದಲ್ಲಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ಸೂಚನೆಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ ಕಾಯುತ್ತಿರುವುದಾಗಿ ಜಿಲ್ಲಾ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
Advertisement