
ನವದೆಹಲಿ: ಅಟ್ಟಾರಿ-ವಾಘಾ ಗಡಿ ಮೂಲಕ ಕಳೆದ ಎರಡು ದಿನಗಳಲ್ಲಿ ಸುಮಾರು 272 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ಕ್ ವೀಸಾದಡಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಪ್ರಜೆಗಳು ದೇಶ ಬಿಟ್ಟು ತೆರಳಲು ವಿಧಿಸಿದ್ದ ಗಡುವು ಭಾನುವಾರ ಅಂತ್ಯಗೊಂಡಿದ್ದು. ಇನ್ನೂ ನೂರಾರು ಮಂದಿ ಭಾರತ ತೊರೆಯುವ ನಿರೀಕ್ಷೆಯಿದೆ. 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ 629 ಭಾರತೀಯರು ಪಂಜಾಬ್ನಲ್ಲಿರುವ ಅಂತಾರಾಷ್ಟ್ರೀಯ ಗಡಿ ದಾಟುವ ಮೂಲಕ ಪಾಕಿಸ್ತಾನದಿಂದ ಮರಳಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಬೆಂಬಲಿತ ಭಯೋತ್ಪಾದಕರಿಂದ 26 ಜನರನ್ನು ಕೊಂದ ನಂತರ ಪಾಕ್ ಪ್ರಜೆಗಳು ಭಾರತ ತೊರೆಯುವಂತೆ ಕೇಂದ್ರ ಸರ್ಕಾರ ಗಡುವು ವಿಧಿಸಿದೆ.
ಸಾರ್ಕ್ ವೀಸಾಗಳನ್ನು ಹೊಂದಿರುವವರು ಭಾರತದಿಂದ ನಿರ್ಗಮಿಸಲು ಗಡುವು ಏಪ್ರಿಲ್ 26 ಆಗಿತ್ತು. ವೈದ್ಯಕೀಯ ವೀಸಾಗಳನ್ನು ಹೊಂದಿರುವವರಿಗೆ, ಗಡುವು ಏಪ್ರಿಲ್ 29 ಆಗಿದೆ.
ಭಾನುವಾರದೊಳಗೆ ಭಾರತವನ್ನು ತೊರೆಯಬೇಕಾದ 12 ವಿಭಾಗಗಳ ವೀಸಾಗಳೆಂದರೆ - ಆಗಮನಕ್ಕಾಗಿ ವೀಸಾ, ವ್ಯಾಪಾರ, ಚಲನಚಿತ್ರ, ಪತ್ರಕರ್ತರು, ಸಾರಿಗೆ, ಸಮ್ಮೇಳನ, ಪರ್ವತಾರೋಹಣ, ವಿದ್ಯಾರ್ಥಿ, ಸಂದರ್ಶಕ, ಪ್ರವಾಸಿ ಹಾಗೂ ಯಾತ್ರಿಕರ ಗುಂಪುಗಳಾಗಿವೆ. ಆದಾಗ್ಯೂ, ದೀರ್ಘಾವಧಿಯ ಮತ್ತು ರಾಜತಾಂತ್ರಿಕ ಅಥವಾ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಅಧಿಕಾರಿಗಳ ಪ್ರಕಾರ, ಏಪ್ರಿಲ್ 25 ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ 191 ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದಿದ್ದು, ಏಪ್ರಿಲ್ 26 ರಂದು 81 ಜನರು ನಿರ್ಗಮಿಸಿದ್ದಾರೆ. ಏಪ್ರಿಲ್ 25 ರಂದು 287 ಭಾರತೀಯರು ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದಾರೆ. 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 342 ಭಾರತೀಯರು ಏಪ್ರಿಲ್ 26 ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನದಿಂದ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪಾಕಿಸ್ತಾನಿಗಳು ವಿಮಾನ ನಿಲ್ದಾಣಗಳ ಮೂಲಕವೂ ಭಾರತವನ್ನು ತೊರೆದಿರಬಹುದು, ಭಾರತವು ಪಾಕಿಸ್ತಾನದೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿಲ್ಲದ ಕಾರಣ ಅವರು ಇತರ ದೇಶಗಳಿಗೆ ತೆರಳಿರಬಹುದು ಎಂದು ಅವರು ಹೇಳಿದರು.
Advertisement