
ಕಾಶ್ಮೀರ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏ.22ರಂದು ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಾಳಿ ನಡೆದು ಒಂದು ವಾರ ಕಳೆಯುತ್ತಿದ್ದು, ಇದರ ನಡುವಲ್ಲೇ ಕಾಶ್ಮೀರದಲ್ಲೂ ಪರಿಸ್ಥಿತಿಗಳು ಬದಲಾಗುತ್ತಿವೆ. ಪಹಲ್ಗಾಮ್'ನತ್ತ ಇದೀಗ ಮತ್ತೆ ಪ್ರವಾಸಿಗರು ಮುಖ ಮಾಡಿದ್ದು, ಇದರಿಂದ ಭಯೋತ್ಪಾದನೆ ಮತ್ತು ಭಯದ ವಿರುದ್ಧ ಸ್ಥಿತಿಸ್ಥಾಪಕತ್ವವು ಜಯಗಳಿಸಿದಂತಾಗಿದೆ.
ಏಪ್ರಿಲ್ 22ರಂದು ಉಗ್ರರ ದಾಳಿ ಬಳಿಕ ಪ್ರೇಮ ಕಾಶ್ಮೀರ ಸಂಪೂರ್ಣ ಸ್ತಬ್ಧವಾಗಿತ್ತು. ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಅಪಾಯವಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಾಶ್ಮೀರ ಪ್ರವಾಸ ಬುಕ್ ಮಾಡಿದ್ದವರು ರದ್ದು ಮಾಡುತ್ತಿದ್ದರು. ಆದರೀಗ ಪ್ರವಾಸೋದ್ಯಮ ತಜ್ಞರು ಲೆಕ್ಕಾಚಾರ ಉಲ್ಟಾ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.
ಶನಿವಾರ ಹಾಗೂ ಭಾನುವಾರ ಪಹಲ್ಗಾಮ್ ನಲ್ಲಿ ಗುಂಪು ಗುಂಪುಗಳಾಗಿ ಪ್ರವಾಸಿಗರು ಬಂದಿದ್ದು, ಲಿದರ್ ನದಿ ದಡದಲ್ಲಿರುವ ಸೆಲ್ಫಿ ಪಾಯಿಂಟ್ನಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು.
ಪುಣೆಯ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರು. ಉಗ್ರರ ದಾಳಿಯ ಒಂದು ದಿನದ ನಂತರ ಏಪ್ರಿಲ್ 23 ರಂದು ಶ್ರೀನಗರಕ್ಕೆ ದಂಪತಿ ಆಗಮಿಸಿದ್ದಾರೆ.
ನಾವು ಶ್ರೀನಗರಕ್ಕೆ ಬಂದಾಗ, ಸ್ವಲ್ಪ ಭಯಭೀತರಾಗಿದ್ದೆವು. ಆದರೆ, ನಂತರ ನಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಕ್ಯಾಬ್ ಚಾಲಕರು, ಹೋಟೆಲ್ ಮಾಲೀಕರು, ಶಿಕಾರಾ ವಾಲಾಗಳಿಂದ ಸ್ಥಳೀಯರವರೆಗೆ ಎಲ್ಲರೂ ತುಂಬಾ ಸಹಾಯಕವಾಗಿದ್ದಾರೆಂದು ಹೇಳಿದ್ದಾರೆ.
ಸೋಮವಾರ ಪಹಲ್ಗಾಮ್ಗೆ ಹೋಗುತ್ತೇವೆ. ಪ್ರಸ್ತುತದ ಪರಿಸ್ಥಿತಿ ನಾವಿಲ್ಲಿ ಸುರಕ್ಷಿತ ಮತ್ತು ಸುಭದ್ರವಾಗಿದ್ದೇವೆಂಬ ಭಾವನೆ ಮೂಡುವಂತೆ ಮಾಡಿದೆಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಯುವಕರು, ವೃದ್ಧರು ಮತ್ತು ಮಕ್ಕಳನ್ನು ಒಳಗೊಂಡ 50 ಮಂದಿಯುಳ್ಳ ಪ್ರವಾಸಿಗರ ಗುಂಪು ಶನಿವಾರ ಸಂಜೆ ಪಹಲ್ಗಾಮ್ಗೆ ಆಗಮಿಸಿದದು, ಸ್ಥಳದಲ್ಲಿ ಒಂದು ರಾತ್ರಿ ಕಳೆದಿದೆ.
ಏಪ್ರಿಲ್ 22 ರಂದು ನಾವಿಲ್ಲಿಗೆ ಬಂದಾಗ ನಮ್ಮ ಮನೆಯವರು ಸಾಕಷ್ಟು ಆತಂಕಗೊಂಡಿದ್ದರು. ಸ್ಥಳೀಯರು ತುಂಬಾ ಸಹಕಾರಿ ಮತ್ತು ಬೆಂಬಲ ನೀಡುತ್ತಿದ್ದಾರೆ, ಭದ್ರತಾ ಪಡೆಗಳು ಸಹ ಸುತ್ತಲೂ ಇರುವುದರಿಂದ ನಾವು ಸುರಕ್ಷಿತರಾಗಿದ್ದೇವೆಂಬ ಭಾವನೆ ಮೂಡುತ್ತಿದೆ ಎಂದು ಡಾ. ಶುಬಾಂಗ್ನಿ ಎಂಬುವವರು ಹೇಳಿದ್ದಾರೆ.
ಗುಂಪಿನ ಮತ್ತೊಬ್ಬ ಸದಸ್ಯೆ ತ್ರಿವೇಣಿ ತೈಡಾ ಅವರು ಮಾತನಾಡಿ, ಪಹಲ್ಗಾಮ್ ನಲ್ಲಿರುವುದು ಭಯವಾಗುತ್ತಿಲ್ಲ. ಯಾವುದೇ ಭಯದ ವಾತಾವರಣ ಕೂಡ ಇಲ್ಲ. ಕಾಶ್ಮೀರ ಬಹಳ ಸುಂದರವಾದ ಸ್ಥಳವಾಗಿದೆ. ನಮ್ಮ ದೇಶದವರು ಈ ಸ್ಥಳಕ್ಕೆ ಭೇಟಿ ನೀಡಬೇಕು. ಕಾಶ್ಮೀರಿಗಳ ಆತಿಥ್ಯದಿಂದ ನಾವು ಉತ್ಸುಕರಾಗಿದ್ದೇವೆ. ಇದೀಗ ಕಾಶ್ಮೀರದ ರಾಯಭಾರಿಗಾಗಿ ನಾವು ಕಾರ್ಯನಿರ್ವಹಿಸುತ್ತೇವ. ಮನೆಗೆ ಹಿಂದಿರುಗಿದ ನಂತರ ಇತರರಿಗೆ ಕಾಶ್ಮೀರಕ್ಕೆ ಭೇಟಿ ನೀಡುವಂತೆ ಉತ್ತೇಜಿಸುತ್ತೇವೆಂದು ತಿಳಿಸಿದ್ದಾರೆ.
ಕ್ರೊಯೇಷಿಯಾದ ವಾಲ್ಟ್ವೊಎಂಂಬುವವರು ಮಾತನಾಡಿ, ಕಾಶ್ಮೀರವು ಅತ್ಯಂತ ಸುಂದರವಾಗಿದೆ. ನಾನು ಕಾಶ್ಮೀರಕ್ಕೆ 6 ಬಾರಿ ಭೇಟಿ ನೀಡುತ್ತಿದ್ದೇನೆ. ನನ್ನೊಂದಿಗೆ ಬಂದಿರುವವರು ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಬಂದಿದ್ದಾರೆ. ಏಪ್ರಿಲ್ 24 ರಂದು ಶ್ರೀನಗರಕ್ಕೆ ಬಂದ ನಂತರ ನಮಗೆ ಯಾವುದೇ ಭದ್ರತಾ ಸಮಸ್ಯೆ ಎದುರಾಗಲಿಲ್ಲ ಎಂದು ಹೇಳಿದ್ದಾರೆ.
ಗುರ್ಗಾಂವ್ನ ಪ್ರವಾಸಿಗರಾದ ಕುನಾಲ್ ಮಹಾಜನ್ ಅವರು, ಪತ್ನಿ ಮತ್ತು ಮಕ್ಕಳೊಂದಿಗೆ ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.
ನಮ್ಮ ಪ್ರವಾಸ ಮೊಟಕುಗೊಳಿಸುವ ಬಗ್ಗೆ ನಾವು ಯೋಜಿಸಲಿಲ್ಲ. ಇಲ್ಲಿಯವರೆಗೆ ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಶ್ರೀನಗರದ ಇತರ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ಸ್ಥಳೀಯರು ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ, ಅವರ ಬೆಂಬಲದಿಂದಾಗಿ ನಾವು ಯಾವುದೇ ಭಯ ಅಥವಾ ಬೆದರಿಕೆ ಇಲ್ಲದೆ ಮುಕ್ತವಾಗಿ ತಿರುಗಾಡುತ್ತಿದ್ದೇವೆಂದು ಹೇಳಿದ್ದಾರೆ.
Advertisement