
ತಿರುವನಂತಪುರಂ: ಕೇರಳದ ಮುಖ್ಯಮಂತ್ರಿಗಳ ಕಚೇರಿ, ಕ್ಲಿಫ್ ಹೌಸ್, ರಾಜಭವನ, ತಿರುವನಂತಪುರಂನಲ್ಲಿರುವ ಸಾರಿಗೆ ಆಯುಕ್ತರ ಕಚೇರಿ ಮತ್ತು ಕೊಚ್ಚಿಯ ನೆಡುಂಬಸ್ಸೆರಿ ವಿಮಾನ ನಿಲ್ದಾಣ ಸೇರಿದಂತೆ ಕೇರಳದ ಐದು ಪ್ರಮುಖ ಸ್ಥಳಗಳಿಗೆ ಸೋಮವಾರ ಹೊಸದಾಗಿ ಬಾಂಬ್ ಬೆದರಿಕೆ ಬಂದಿರುವುದಾಗಿ ವರದಿಯಾಗಿದೆ.
ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ತಂಡಗಳು ಎಲ್ಲಾ ಸ್ಥಳಗಳಲ್ಲಿ ತಪಾಸಣೆ ಆರಂಭಿಸಿವೆ.
ತಿರುವನಂತಪುರಂನಲ್ಲಿ ಮಧ್ಯಾಹ್ನ 2 ಗಂಟೆಯ ವೇಳೆಗೆ ನಾಲ್ಕು ಕೇಂದ್ರಗಳಲ್ಲಿ ಮತ್ತು ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.30 ರ ಸುಮಾರಿಗೆ ಸ್ಫೋಟ ಸಂಭವಿಸಲಿದೆ ಎಂಬ ಎಚ್ಚರಿಕೆಯ ಸಂದೇಶ ಕಳುಹಿಸಲಾಗಿದೆ. ಇಮೇಲ್ಗಳ ಸ್ವರೂಪ ಒಂದೇ ರೀತಿಯದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ ವಿಮಾನ ನಿಲ್ದಾಣ ಸ್ಟೋಟಿಸುವುದಾಗಿ ನನ್ನೆ ಇದೇ ರೀತಿಯ ಸಂದೇಶ ಬಂದಿತ್ತು. ಕಳೆದ ಮೂರು ವಾರಗಳಿಂದ ರಾಜ್ಯವನ್ನು ಪೀಡಿಸುತ್ತಿರುವ ಹುಸಿ ಬಾಂಬ್ ಬೆದರಿಕೆ ಕರೆಗಳು ಕಡಿಮೆಯಾಗಿವೆ ಎಂದು ಅಧಿಕಾರಿಗಳು ನಂಬಿದ್ದರು, ಆದರೆ ಸೋಮವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮತ್ತೆ ಹೊಸದಾಗಿ ಬಾಂಬ್ ಬೆದರಿಕೆ ಬರಲು ಶುರು ಆಗಿದೆ.
ಆರಂಭಿಕ ಪರಿಶೀಲನೆ ವೇಳೆ ಹುಸಿ ಬೆದರಿಕೆ ಎಂದು ಸೂಚಿಸಿದರೂ, ಭದ್ರತಾ ಏಜೆನ್ಸಿಗಳು ತೀವ್ರ ತಪಾಸಣೆ ನಡೆಸುತ್ತಿವೆ. ಸಿಐಎಸ್ಎಫ್ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಇಂತಹ ಎಂಟು ಹುಸಿ ಬಾಂಬ್ ಬೆದರಿಕೆ ಕರೆ ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement